ಮಕ್ಕಳು ಅಂದದ ಬಾಲ್ಯದಿಂದ ವಂಚಿತರಾಗುತ್ತಿದ್ದಾರೆ

0
sudheendra bindagi
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಕ್ಕಳು ಮಾನಸಿಕವಾಗಿ ಸದೃಢವಾಗಲು ಹಾಗೂ ಅವರಲ್ಲಿನ ಬೌದ್ಧಿಕ ಪ್ರಜ್ಞೆ ವಿಕಸಿತಗೊಳ್ಳಲು ಮಕ್ಕಳಿಗೆ ನಮ್ಮ ತಲೆಮಾರು ಪರಂಪರೆ ಅನುಭವಿಸುವ ವಾತಾವರಣ ಕಲ್ಪಿಸುವುದು ಅನಿವಾರ್ಯ. ಆದರೆ ನಗರೀಕರಣದ ಬೆಳವಣಿಗೆಯಲ್ಲಿ ಮಕ್ಕಳು ತಮಗೆ ಬಾಲ್ಯದಲ್ಲಿ ಸಿಗಬೇಕಾದ ಅನೇಕ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ವೇಗವಾಗಿ ಓಡುತ್ತಿರುವ ಆಧುನಿಕ ಜಗತ್ತಿನಲ್ಲಿ ನಮ್ಮ ಮಕ್ಕಳು ಬಾಲ್ಯ ಸುಖ ಕಳೆದುಕೊಂಡು ಏಕಾಂತ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಇಸ್ರೋದ ವಿಶ್ರಾಂತ ವಿಜ್ಞಾನಿ ಸುಧೀಂದ್ರ ಎಸ್. ಬಿಂದಗಿ ಅಭಿಪ್ರಾಯಪಟ್ಟರು.

Advertisement

ನಗರದ ವಿದ್ಯಾದಾನ ಸಮಿತಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಪೋಷಕರಿಗೆ ಎಷ್ಟೇ ಒತ್ತಡ ಹಾಗೂ ಸಮಯದ ಕೊರತೆಗಳು ಇದ್ದರೂ ಮಕ್ಕಳಿಗಾಗಿ ಸಮಯ ಮಾಡಿಕೊಂಡು ಅವರಿಗೆ ಸಹಜ ಬಾಲ್ಯ ಕಲ್ಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾದಾನ ಸಮಿತಿ ಶಿಕ್ಷಣ ಸಂಸ್ಥೆಯು ತನ್ನ ಶಿಕ್ಷಣ ವಿಧಾನದಲ್ಲಿ ನಮ್ಮ ನೆಲದ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆ ಪರಿಚಯಿಸುವ ಕಾರ್ಯವನ್ನು ಅಳವಡಿಸಿಕೊಂಡಿದೆ. ಇದರ ಜೊತೆಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿ ಮಕ್ಕಳಿಗೆ ಜ್ಞಾನದ ಜೊತೆಗೆ ಸಂಸ್ಕೃತಿ-ಪರಂಪರೆಯನ್ನು ಪರಿಚಯ ಮಾಡಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರತರಲು ಇಂತಹ ಬೇಸಿಗೆ ಶಿಬಿರಗಳು ಸಹಾಯಕಾರಿಯಾಗಲಿವೆ.

ಶಿಬಿರದಲ್ಲಿ ಪಡೆದ ತರಬೇತಿ ಮಕ್ಕಳ ಜೀವನದ ಮೇಲೆ ಸಾಕಷ್ಟು ಸಕರಾತ್ಮಕ ಪರಿಣಾಮ ಬೀರಲಿದೆ. ಪ್ರತೀ ಮಗು ವಿದ್ಯಾರ್ಥಿ ಜೀವನದಲ್ಲಿ ಇರುವಾಗಲೇ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳಲು ಕಲಿಯಲು ಈ ಶಿಬಿರವು ಸಹಾಯಕವಾಗುತ್ತದೆ. ಸಹಜ ಬಾಲ್ಯ ಮಕ್ಕಳ ಬೆಳವಣಿಗೆಗೆ ಗಟ್ಟಿತನವನ್ನು ರೂಪಿಸಲಿದೆ ಎಂದು ಶಿಬಿರದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಕರೆ ನೀಡಿದರು.

ಶಾಲೆಯ ನಿವೃತ್ತ ಚಿತ್ರಕಲಾ ಶಿಕ್ಷಕ ಪಿ.ಎ. ಕುಲಕರ್ಣಿ ಸಾಮದರ್ಭಿಕವಾಗಿ ಮಾತನಾಡಿದರು. ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬೇಸಿಗೆ ಶಿಬಿರದ ಕುರಿತು ಮಕ್ಕಳು ಹಾಗೂ ಪಾಲಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಂಗೀತ ಶಿಕ್ಷಕ ರಾಕೇಶ ಕುಲಕರ್ಣಿ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲೆಯ ಸಹ ಶಿಕ್ಷಕಿ ಸುಮಂಗಲಾ ಆಸಂಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಹಿರಿಯ ಶಿಕ್ಷಕಿ ರೇಣುಕಾ ವೆಂಕಟಾಪುರ ಪರಿಚಯ ಭಾಷಣವನ್ನು ಮಾಡಿದರು.

ಕಾರ್ಯಕ್ರಮದಲ್ಲಿ ಶುಭಾ ಎಸ್.ಬಿಂದಗಿ, ಶಾಲೆಯ ಶೈಕ್ಷಣಿಕ ಮಾರ್ಗದರ್ಶಕ ಪ್ರತೀಕ ಎಸ್. ಹುಯಿಲಗೋಳ, ಉಪನ್ಯಾಸಕರಾದ ಪಿ.ಎಸ್. ಲಕ್ಕುಂಡಿ, ಪ್ರಶಾಂತ ಪಾಟೀಲ, ಮುಖ್ಯೋಪಾಧ್ಯಾಯ ಎಂ.ಆರ್. ಡೊಳ್ಳಿನ, ಶಿಕ್ಷಕರು, ಸಿಬ್ಬಂದಿ ವರ್ಗದವರಿದ್ದರು.

ಶಾಲೆಯ ಆಡಳಿತಾಧಿಕಾರಿ ಡಾ. ಗಂಗೂಬಾಯಿ ಪವಾರ ಮಾತನಾಡಿ, ಮಕ್ಕಳ ಮನಸ್ಸು ವಿಕಾಸಗೊಳ್ಳಲು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಪೋಷಕರು ಆದ್ಯತೆ ಕೊಡಬೇಕು. ಇಂದಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳು ಹೆಚ್ಚಿನ ಅಂಕ ಗಳಿಸಬೇಕು ಎಂದು ಆಶಿಸುತ್ತಾರೆ. ಆದರೆ ಅವರ ಮಾನಸಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಗಮನ ಹರಿಸುವುದು ಕಡಿಮೆಯಾಗಿದೆ. ಅವರ ಚಟುವಟಿಕೆಗಳು ಕೇವಲ ಶಿಬಿರಕ್ಕೆ ಮೀಸಲಾಗದೆ ಪ್ರತಿನಿತ್ಯವೂ ಪ್ರೋತ್ಸಾಹಿಸಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.


Spread the love

LEAVE A REPLY

Please enter your comment!
Please enter your name here