HomeSports Newsತಂಡದಿಂದ ಹೊರಗಿಟ್ಟಾಗ ಒಳಗೊಳಗೆ ನೋವಿತ್ತು: ಕೊನೆಗೂ ಮೌನ ಮುರಿದ ಸೂರ್ಯಕುಮಾರ್ ಯಾದವ್!

ತಂಡದಿಂದ ಹೊರಗಿಟ್ಟಾಗ ಒಳಗೊಳಗೆ ನೋವಿತ್ತು: ಕೊನೆಗೂ ಮೌನ ಮುರಿದ ಸೂರ್ಯಕುಮಾರ್ ಯಾದವ್!

For Dai;y Updates Join Our whatsapp Group

ನವದೆಹಲಿ: ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆಲುವು ತಂದುಕೊಟ್ಟ ಬಳಿಕವೇ ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿದ್ದ ವಿಚಾರದ ಕುರಿತು ಟೀಂ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಆಕಾಶ್ ಚೋಪ್ರಾ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಸೂರ್ಯ, ತಂಡದ ಆಯ್ಕೆಯಿಂದ ತಮಗೆ ಉಂಟಾದ ಆಘಾತ ಹಾಗೂ ಆ ಸಂದರ್ಭವನ್ನು ಹೇಗೆ ಎದುರಿಸಿದರು ಎಂಬುದನ್ನು ಹಂಚಿಕೊಂಡಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಹೊರಗಿಟ್ಟಿತ್ತು. ಅವರ ಬದಲಿಗೆ ಮುಂದಿನ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಕಳೆದ ಎರಡು ವರ್ಷಗಳಲ್ಲಿ ಸೂರ್ಯಕುಮಾರ್ ಅವರ ಬ್ಯಾಟಿಂಗ್ ಫಾರ್ಮ್ ನಿರೀಕ್ಷಿತ ಮಟ್ಟದಲ್ಲಿರದಿರುವುದು ಅವರನ್ನು ತಂಡದಿಂದ ಕೈಬಿಡಲು ಪ್ರಮುಖ ಕಾರಣ ಎಂದು ಹೇಳಲಾಗಿತ್ತು. 2025ರಲ್ಲಿ ಭಾರತ ಪರ ಆಡಿದ ಯಾವುದೇ ಪಂದ್ಯದಲ್ಲೂ ಅವರು ಅರ್ಧಶತಕ ಗಳಿಸಿರಲಿಲ್ಲ. ತವರಿನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಅಮೆರಿಕ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ ಪ್ರಮುಖ ಇನಿಂಗ್ಸ್ ಹೊರತುಪಡಿಸಿ ಅವರ ಬ್ಯಾಟಿಂಗ್ ಪ್ರದರ್ಶನ ಗಮನಾರ್ಹವಾಗಿರಲಿಲ್ಲ.

ಆದರೆ ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರ ಸಾಧನೆ ಅತ್ಯುತ್ತಮವಾಗಿತ್ತು. ಅವರ ನಾಯಕತ್ವದಲ್ಲಿ ಭಾರತ ತಂಡ ಒಂದೇ ಒಂದು ಸರಣಿಯನ್ನೂ ಸೋಲದೆ, ಏಷ್ಯಾಕಪ್ ಜೊತೆಗೆ ತವರಿನಲ್ಲೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು. ಇಂತಹ ಸಂದರ್ಭದಲ್ಲಿ ತಂಡದಿಂದಲೇ ಹೊರಗುಳಿಯಬೇಕಾದ ಪರಿಸ್ಥಿತಿ ಎದುರಾದಾಗ ಸೂರ್ಯಕುಮಾರ್ ಅದನ್ನು ಹೇಗೆ ಸ್ವೀಕರಿಸಿದರು ಎಂಬುದು ಇದೀಗ ಬಹಿರಂಗವಾಗಿದೆ.

‘ತಂಡದಲ್ಲಿ ನನ್ನ ಹೆಸರು ಇರಲಿಲ್ಲ, ನಾನು ನಗುತ್ತಿದ್ದೆ’

ತಂಡದ ಆಯ್ಕೆಯಲ್ಲಿ ತಮ್ಮ ಹೆಸರು ಇಲ್ಲ ಎಂಬ ವಿಚಾರ ತಿಳಿದಾಗ ತಾವು ಯಾವುದೇ ತೀವ್ರ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಸೂರ್ಯ ಹೇಳಿದ್ದಾರೆ. ಬದಲಾಗಿ ಆಯ್ಕೆಗಾರರ ಸ್ಥಾನದಲ್ಲಿ ನಿಂತು ಅವರ ನಿರ್ಧಾರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ.

ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ ತಂಡದೊಂದಿಗೆ ಆಡುತ್ತಿದ್ದಾಗಲೂ ಒತ್ತಡದ ಸಂದರ್ಭಗಳು ಎದುರಾದಾಗ ಅಥವಾ ಪರಿಸ್ಥಿತಿಗಳು ತಮ್ಮ ಪರವಾಗಿರದಿದ್ದಾಗ ತಾವು ನಗುತ್ತಾ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುತ್ತಿದ್ದೆ ಎಂದು ಸೂರ್ಯ ಹೇಳಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರದರ್ಶನ ನೀಡಲು ದೊರೆತ ಅವಕಾಶಗಳನ್ನು ನೆನಪಿಸಿಕೊಂಡು ಅದಕ್ಕಾಗಿ ಕೃತಜ್ಞನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

‘ಮುಂದಿನ ಎರಡು ವರ್ಷ ತಂಡವನ್ನು ಮುನ್ನಡೆಸುತ್ತೇನೆ ಅಂದುಕೊಂಡಿದ್ದೆ’

ಆದರೆ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ತಾವು ಎಂದಿಗೂ ಯೋಚಿಸಿರಲಿಲ್ಲ ಎಂದು ಸೂರ್ಯಕುಮಾರ್ ಹೇಳಿದ್ದಾರೆ. 2026ಕ್ಕೆ ಕಾಲಿಟ್ಟ ಬಳಿಕ ಮುಂದಿನ ಎರಡು ವರ್ಷಗಳ ಕಾಲ ಭಾರತ ತಂಡವನ್ನು ಮುನ್ನಡೆಸುತ್ತೇನೆ ಎಂದೇ ಭಾವಿಸಿದ್ದೆ ಎಂದು ಅವರು ತಿಳಿಸಿದ್ದಾರೆ.

ಮುಂದೆ ಒಲಿಂಪಿಕ್ಸ್, ಮತ್ತೊಂದು ಟಿ20 ವಿಶ್ವಕಪ್ ಸೇರಿದಂತೆ ಹಲವು ಪ್ರಮುಖ ಸವಾಲುಗಳು ಎದುರಾಗಲಿವೆ. ಹೀಗಾಗಿ ತಂಡವನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂಬ ನಿರೀಕ್ಷೆ ಹೊಂದಿದ್ದೆ ಎಂದು ಸೂರ್ಯ ಹೇಳಿದ್ದಾರೆ.

ಆದರೆ ನಾವು ಏನು ಯೋಚಿಸುತ್ತೇವೆ ಮತ್ತು ಮತ್ತೊಬ್ಬ ವ್ಯಕ್ತಿ ಏನು ಯೋಚಿಸುತ್ತಾರೆ ಎಂಬುದು ಎರಡು ವಿಭಿನ್ನ ವಿಚಾರಗಳು. ಆಯ್ಕೆಗಾರರು ತೆಗೆದುಕೊಂಡ ನಿರ್ಧಾರವನ್ನು ಗೌರವಿಸುವುದು ಮುಖ್ಯ ಎಂದು ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.

‘ಬೇರೆ ನಾಯಕತ್ವದಲ್ಲಿ ತಂಡ ಉತ್ತಮವಾಗಿ ಆಡಿದರೂ ನನಗೆ ಸಮಸ್ಯೆಯಿಲ್ಲ’

ತಂಡದಿಂದ ಕೈಬಿಡುವ ನಿರ್ಧಾರದ ಬಗ್ಗೆ ತಾವು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಸೂರ್ಯಕುಮಾರ್ ಸ್ಪಷ್ಟಪಡಿಸಿದ್ದಾರೆ. ಆ ಸಮಯದಲ್ಲಿ ತಂಡದ ಹಿತದೃಷ್ಟಿಯಿಂದ ಇದೇ ಉತ್ತಮ ನಿರ್ಧಾರ ಎಂದು ಆಯ್ಕೆಗಾರರು ಭಾವಿಸಿ ಆ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರ ನಿರ್ಧಾರವನ್ನು ಗೌರವಿಸಿದ್ದೇನೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಬೇರೆ ನಾಯಕತ್ವದಲ್ಲಿ ಭಾರತ ತಂಡ ಇನ್ನಷ್ಟು ಉತ್ತಮವಾಗಿ ಆಡಿದರೆ ಅದರಿಂದ ತಮಗೆ ಯಾವುದೇ ಸಮಸ್ಯೆಯಿಲ್ಲ ಎಂದು ಸೂರ್ಯಕುಮಾರ್ ಯಾದವ್ ಭಾವುಕರಾಗಿ ತಿಳಿಸಿದ್ದಾರೆ.

ನಾಯಕನಾಗಿ ಭಾರತಕ್ಕೆ ದೊಡ್ಡ ಗೆಲುವುಗಳನ್ನು ತಂದುಕೊಟ್ಟ ಬಳಿಕವೇ ನಾಯಕತ್ವ ಹಾಗೂ ತಂಡದ ಸ್ಥಾನ ಕಳೆದುಕೊಂಡ ಸೂರ್ಯಕುಮಾರ್ ಅವರ ಈ ಹೇಳಿಕೆ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img