ದಾವಣಗೆರೆ: ಸೂರ್ಯ ಚಂದ್ರು ಇರುವುದು ಎಷ್ಡು ಸತ್ಯವೋ ವಿಜಯೇಂದ್ರ ಸಿಎಂ ಆಗುವುದು ಅಷ್ಟೇ ಸತ್ಯ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಸಂಘಟಿಸಲು ಮತ್ತು ಪುನಃ ಅಧಿಕಾರಕ್ಕೆ ತರಲು ಬಿಎಸ್ ಯಡಿಯೂರಪ್ಪನವರು ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಲಿದ್ದಾರೆಯೇ ಹೊರತು ಬಿವೈ ವಿಜಯೇಂದ್ರರನ್ನು ಮುಖ್ಯಮಂತ್ರಿ ಮಾಡಲು ಅಲ್ಲ,
ಅವರನ್ನು ಸಿಎಂ ಮಾಡಬೇಕೆನ್ನುವುದು ರಾಜ್ಯದ ಕಾರ್ಯಕರ್ತರ ಮತ್ತು ಜನರ ಸಂಕಲ್ಪವಾಗಿದೆ, ಅವರನ್ನು ಮುಖ್ಯಮಂತ್ರಿ ಮಾಡೇ ಮಾಡುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.
ಇನ್ನೂ ಮಹಾನ್ ನಾಯಕನೊಬ್ಬ ಸೋತ ಶಾಸಕರ ಸಭೆಯ ನಂತರ 17 ಜನ ತನಗೆ ಫೋನ್ ಮಾಡಿ ವಿಜಯೇಂದ್ರನ ಒತ್ತಾಯಕ್ಕೆ ಮಣಿದು ಸಭೆಗೆ ಹೋಗಿದ್ದೆವು ಅಂದಿದ್ದಾನೆ, ಬೇರೆ ಪಕ್ಷದಲ್ಲಿದ್ದ ಅವನು ಯಡಿಯೂರಪ್ಪನವರ ಕಾಲು ಹಿಡಿದು ಬಿಜೆಪಿ ಸೇರಿದ್ದು ತನಗೆ ಗೊತ್ತಿಲ್ಲವೇ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ರೀತಿ ಪಕ್ಷಕ್ಕೆ ಬಿವೈ ವಿಜಯೇಂದ್ರ ಸಿಕ್ಕಿದ್ದಾರೆ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ. ವಕ್ಫ್ ಅಂತ ಹೇಳಿಕೊಂಡು ಒಂದು ತಂಡ ಗೊಂದಲ ಮಾಡುತ್ತಿದೆ ಎಂದು ಪರೋಕ್ಷವಾಗಿ ಯತ್ನಾಳ್ ಬಣಕ್ಕೆ ತಿರುಗೇಟು ನೀಡಿದ್ದಾರೆ.