ಉಡುಪಿ:- ಇಂದು ಉಡುಪಿಗೆ ಭೇಟಿ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕನಕನ ಕಿಂಡಿಯಲ್ಲಿ ಶ್ರೀ ಕೃಷ್ಣನ ದರ್ಶನ ಪಡೆದು 4 ಸಂಕಲ್ಪಕ್ಕೆ ಕರೆ ಕೊಟ್ಟಿದ್ದಾರೆ.
ಶ್ರೀ ಕೃಷ್ಣನ ದರ್ಶನ ಬಳಿಕ ಉಡುಪಿ ಲಕ್ಷ ಕಂಠ ಭಗವದ್ಗೀತಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ʻಎಲ್ಲರಿಗೂ ನಮಸ್ಕಾರ.. ಜೈ ಶ್ರೀಕೃಷ್ಣʼ ಎನ್ನುತ್ತಾ ಕನ್ನಡದಲ್ಲೇ ಮಾತು ಆರಂಭಿಸಿದರು. ಕನಕದಾಸರಿಗೆ ನಮಿಸುವ ಪುಣ್ಯ ಇಂದು ನನಗೆ ಸಿಕ್ಕಿದೆ. ನನ್ನಂಥ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು. ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಸಂಕಲ್ಪ ಮಾಡಲಾಗಿದೆ. ನಮ್ಮ ಮೊದಲ ಸಂಕಲ್ಪ ʻನೀರು ನದಿಯ ರಕ್ಷಿಸೋದುʼ ಆಗಲಿ. ಒಬ್ಬ ಬಡವನ ಉದ್ಧಾರ ಮಾಡಲು ಪ್ರಯತ್ನಿಸೋಣ. ಉತ್ತಮ ಆರೋಗ್ಯ, ಯೋಗ ಸಂಕಲ್ಪ ಮಾಡೋಣ ಎಂದು ಕರೆ ನೀಡಿದ್ದಾರೆ.
ಉಡುಪಿ ಕ್ಷೇತ್ರ ಭಕ್ತಿ ಹಾಗೂ ಸೇವೆಯ ಸಂಗಮ ಕ್ಷೇತ್ರ. ನನ್ನ ಜನ್ಮ ಗುಜರಾತ್ ನಲ್ಲಿ ಆಗಿದ್ದು. ಆದ್ರೂ ಗುಜರಾತ್ ಮತ್ತು ಉಡುಪಿಗೆ ಅವಿನಾಭಾವ ಸಂಬಂಧ ಇದೆ. ಉಡುಪಿ ಕೃಷ್ಣನ ದರ್ಶನ ಪಡೆದಿದ್ದು ಆಧ್ಯಾತ್ಮಿಕ ಖುಷಿ ಸಿಕ್ಕಂತಾಗಿದೆ. ಲಕ್ಷ ಕಂಠದ ಮೂಲಕ ಗೀತಾ ಪಠಣ ಒಂದೇ ಸ್ಥಳದಲ್ಲಿ ಒಂದೇ ವೇಳೆ ಆಗಿರೋದು ಹೊಸ ಶಕ್ತಿ ನೀಡಿದಂತಾಗಿದೆ. ಈ ಕೆಲಸ ಮಾಡಿರೋ ಸುಗುಣೇಂದ್ರ ಶ್ರೀಗಳಿಗೆ ಪ್ರಣಾಮ ಸಲ್ಲಿಸುತ್ತೇನೆ ಎಂದರಲ್ಲದೇ ಉಡುಪಿಯು ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿ. ಜನ ಸಂಘದಲ್ಲಿ ನಮ್ಮ ವಿ.ಎಸ್.ಆಚಾರ್ಯರನ್ನ ಆಯ್ಕೆ ಮಾಡಿದ್ದು ಉಡುಪಿಯ ಜನ.
ಮೂರು ದಿನಗಳ ಹಿಂದೆ ನಾನು ಅಯೋಧ್ಯೆಯಲ್ಲಿದ್ದೆ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಧರ್ಮಧ್ವಜ ಸ್ಥಾಪನೆ ಆಗಿದೆ. ಅಯೋಧ್ಯೆಯಿಂದ ಉಡುಪಿಯವರೆಗೂ ರಾಮ ಭಕ್ತರು ಸಾಕ್ಷಿಯಾಗಿದ್ದಾರೆ. ಮಧ್ವಾಚಾರ್ಯರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟ ಮಠಗಳು ಇಂದಿಗೂ ಧರ್ಮಕಾರ್ಯದಲ್ಲಿ ತೊಡಗಿವೆ ಎಂದು ಶ್ಲಾಘಿಸಿದರು.



