ವಿಶ್ವಗುರು ಬಸವಣ್ಣನವರ ವಚನಗಳ ಪಾಲನೆ ಅಗತ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವಗುರು ಬಸವಣ್ಣನವರ ಐಕ್ಯ ಕಾಯಕ ಶರಣರಾದ ಶರಣ ಮಾದಾರ ಚೆನ್ನಯ್ಯ, ಶರಣ ಸಮಗಾರ ಹರಳಯ್ಯ ಹಾಗೂ ಶರಣ ಡೋಹರ ಕಕ್ಕಯ್ಯನವರು ಬಸವಣ್ಣನವರೊಂದಿಗೆ ಸಮ ಸಮಾಜ ನಿರ್ಮಾಣಕ್ಕಾಗಿ ಕಾಯಕನಿಷ್ಠರಾಗಿ ಶ್ರಮಿಸಿದ ಮಹನೀಯರು ಎಂದು ವಿಧಾನ ಪರಿಷತ್ ಶಾಸಕ ಎಸ್.ವಿ. ಸಂಕನೂರ ಹೇಳಿದರು.

Advertisement

ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರು ಕಾಯಕ ತತ್ವ, ದಾಸೋಹ ತತ್ವದ ಮಹತ್ವವನ್ನು ಜಗತ್ತಿಗೆ ಸಾರಿದವರು. ದೇಶದ ಎಲ್ಲ ರಾಜ್ಯದವರು ಬಸವಣ್ಣನವರ ತತ್ವ ವಚನಗಳನ್ನ ಒಪ್ಪಿಕೊಂಡಿದ್ದಾರೆ. ದುಡಿದು ತಿನ್ನಬೇಕು, ದುಡಿದ ದುಡ್ಡಿನಿಂದ ಇನ್ನೊಬ್ಬರಿಗೂ ಹಂಚಿ ಜೀವನ ಸಾಗಿಸಬೇಕು ಎಂಬುದನ್ನು 12ನೇ ಶತಮಾನದಲ್ಲಿ ವಿಶ್ವಕ್ಕೆ ಸಾರಿದವರು ಬಸವಣ್ಣನವರು. ಅವರು ಕಾಯಕನಿಷ್ಠರು, ಸಮಾಜ ಸರಿದಾರಿಗೆ ತರುವಲ್ಲಿ ಇತರರಿಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ಹಾಗೂ ಕಾಯಕ ಶರಣರ ವಚನಗಳು ಅಗತ್ಯವಾಗಿದ್ದು, ಬಸವಣ್ಣನವರ `ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ’ ವಚನ ಎಲ್ಲರೂ ಪಾಲಿಸುವ ಮೂಲಕ ಮುನ್ನಡೆಯೋಣ ಎಂದು ಎಸ್.ವಿ. ಸಂಕನೂರ ತಿಳಿಸಿದರು.

ನಿವೃತ್ತ ಉಪನ್ಯಾಸಕ ಪ್ರೊ. ಸತೀಶ ಪಾಸಿ ಕಾಯಕ ಶರಣರ ಕುರಿತು ಉಪನ್ಯಾಸ ನೀಡುತ್ತಾ, 12ನೇ ಶತಮಾನದ ಶರಣರಲ್ಲಿ ಮಾದಾರ ಚೆನ್ನಯ್ಯ ಬಹು ಮುಖ್ಯವಾದ ವ್ಯಕ್ತಿ. ಸತ್ಯಶುದ್ಧ ಕಾಯಕಕ್ಕೆ ಹೆಸರಾದವರು. ತಮಿಳುನಾಡಿನ ಚೋಳರಾಜನ ಅರಮನೆಯ ಲಾಯಕ್ಕೆ ಹುಲ್ಲು ತರುವ ಕೆಲಸ ಮಾಡಿದರು. ಅನಂತರ ಅವರು ಬಸವಾದಿ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತರಾಗಿ ಕಲ್ಯಾಣಕ್ಕೆ ಬಂದರು. ಅಲ್ಲಿ ತನ್ನ ಕುಲದ ಕಾಯಕವಾದ ಚರ್ಮವನ್ನು ಮುಂದುವರಿಸಿದರು. ದೇವನಿಗೆ ಅಂಬಲಿ ಉಣಿಸಿದ ಪ್ರಸಂಗ ಅವರ ಉಜ್ವಲ ಭಕ್ತಿಗೆ ಉದಾಹರಣೆಯಾಗಿದೆ ಎಂದರು.

ನಿವೃತ್ತ ಪ್ರಾಚಾರ್ಯ ಪ್ರೊ. ಎನ್.ಎಂ. ಪವಾಡಿಗೌಡರ ಕಾಯಕ ಶರಣರ ಕುರಿತು ಉಪನ್ಯಾಸ ನೀಡುತ್ತಾ, ಶರಣ ಸಮಗಾರ ಹರಳಯ್ಯನವರು ತಮ್ಮ ಕುಲ ಕಸುಬಾದ ಜೋಡಿ (ಪಾದರಕ್ಷೆ) ತಯಾರಿಕೆಯಲ್ಲಿ ತೊಡಗಿದ್ದರು. ಹರಳಯ್ಯನವರು ತಯಾರಿಸಿದ ಚಮ್ಮಾವುಗೆಗಳನ್ನು ಒಯ್ದು ಬಸವಣ್ಣನವರಿಗೆ ಕೊಟ್ಟಾಗ, ಅವರು ಭಾವಪರವಶರಾಗಿ, ಅವರನ್ನು ಮೆಟ್ಟಿಕೊಳ್ಳದೆ ಭಯ ಭಕ್ತಿಯಿಂದ, ತಮ್ಮ ತಲೆಯ ಮೇಲೆ ಇಟ್ಟುಕೊಂಡು, `ಇವು ದೇವರ ಪಾದರಕ್ಷೆಗಳು’ ಎಂದರು. ಈ ಪವಿತ್ರ ಚಮ್ಮಾವುಗೆಗಳನ್ನು ಮೆಡುವ ಯೋಗ್ಯತೆ, ಕೂಡಲ ಸಂಗಮನಿಗಲ್ಲದೆ ನನಗೆ ಸಲ್ಲವು ಎಂದು ನುಡಿದಾಗ, ಹರಳಯ್ಯನವರು ಬಸಣ್ಣನವರ ಕಿಂಕರತ್ವವನ್ನು ಮನದಲ್ಲೇ ಕೊಂಡಾಡಿದರು ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಾಬರ್ಚಿ, ಎಸ್.ಎನ್. ಬಳ್ಳಾರಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಇನಾಮ್ದಾರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ರವಿ ಗುಂಜಿಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಮುಂತಾದವರು ಹಾಜರಿದ್ದರು.

ವಚನ ಗಾಯನವನ್ನು ಮೃತ್ಯುಂಜಯ ಹಿರೇಮಠ ಹಾಗೂ ಸಂಗಡಿಗರು ನಡೆಸಿಕೊಟ್ಟರು. ಉಪನ್ಯಾಸಕ ಆರ್.ಬಿ. ಚಿನಿವಾಲರ್ ನಿರ್ವಹಿಸಿದರು.

ಶರಣ ದೋಹರ ಕಕ್ಕಯ್ಯನವರು ಸೇರಿದಂತೆ ಬಸವಾದಿ ಶರಣರು ಮನುಕುಲೋದ್ಧಾರದ ಮಹಾಮಣಿಹದಲ್ಲಿ ತೊಡಗಿದ್ದರು. ಇದರ ಕೀರ್ತಿ ಎಲ್ಲ ಕಡೆ ಹಬ್ಬಿತು. ದೇಶದ ನಾನಾ ಕಡೆಯಿಂದ ಜನರ ಕಲ್ಯಾಣ ಪಟ್ಟಣಕ್ಕೆ ಬಂದು ಸೇರಿದರು. ಮಾಳವ ದೇಶದಿಂದ ಕಕ್ಕಯ್ಯ ಬಂದರು. ಕಕ್ಕಯ್ಯ ಚಂಡಾಲರಲ್ಲಿ ಒಂದು ಪಂಗಡವಾದ ಡೋಹರ ಪಂಗಡಕ್ಕೆ ಸೇರಿದವರು. ಚರ್ಮ ಹದ ಮಾಡುವುದು ಅವರ ವೃತ್ತಿ. ಅವರು ಬಸವಣ್ಣನವರು ಮತ್ತು ಮೊದಲಾದ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತರಾದರು. ಅವರು ಲಿಂಗದೀಕ್ಷೆಯನ್ನು ಹೊಂದಿ ತನ್ನ ಆಚಾರ ಸಂಪನ್ನತೆಯಿಂದ ವೀರ ಮಹೇಶ್ವರನೆಂಬ ಹೆಗ್ಗಳಿಕೆಗೆ ಪಾತ್ರರಾದರು ಎಂದು ಪ್ರೊ. ಎನ್.ಎಂ. ಪವಾಡಿಗೌಡರ ತಿಳಿಸಿದರು.

ಜಗಜ್ಯೋತಿ ಬಸವಣ್ಣನವರ ತತ್ವಗಳು, ವಚನಗಳು ದೇಶದ ಸಂವಿಧಾನ ರಚಸುವಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸ್ಪೂರ್ತಿದಾಯಕವಾದವು. ಸಂವಿಧಾನ ರಚನೆಯಾಗಿ 75 ವರ್ಷಗಳು ಸಂದಿದ್ದು, ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ತತ್ವ ಪಾಲನೆ ಅಗತ್ಯವಿದೆ.

– ಎಸ್.ವಿ. ಸಂಕನೂರ.

ವಿ.ಪ ಸದಸ್ಯರು.


Spread the love

LEAVE A REPLY

Please enter your comment!
Please enter your name here