ಚಿತ್ರದುರ್ಗ:- ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಎನ್ನುವುದು ಸರಿಯಲ್ಲ ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.
ಲಿಂಗಾಯತ ಮತ್ತು ಮುಸ್ಲಿಂ ಧರ್ಮ ಒಂದೇ ಎಂಬರ್ಥದಲ್ಲಿ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶ್ರೀಗಳು ನೀಡಿದ ಹೇಳಿಕೆಯನ್ನು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಬಲವಾಗಿ ವಿರೋಧಿಸಿದ್ದಾರೆ. ಬಸವಣ್ಣ ಸಾಕಾರ ಮತ್ತು ನಿರಾಕಾರ ಈ ಎರಡೂ ತತ್ವಗಳನ್ನು ಒಪ್ಪಿಕೊಂಡವರು. ತಾವೆಲ್ಲಾ ಹಿಂದೂಗಳೇ. ಯಾವಾಗಲೂ ಕೂಡ ಹಿಂದೂಗಳ ಜೊತೆಗಿದ್ದದ್ದು ಲಿಂಗಾಯತರು. ಮುಸ್ಲಿಂ ಧರ್ಮದ ಜೊತೆ ಲಿಂಗಾಯತ ತತ್ವದ ಹೋಲಿಕೆ ಶುದ್ಧ ತಪ್ಪು. ಲಿಂಗಾಯತರದ್ದು ಅಹಿಂಸಾ ತತ್ವ. ಅದರಲ್ಲಿ ಗೋಮಾಂಸ ಸೇವನೆ ಇಲ್ಲ ಎಂದು ಪಂಚಮಸಾಲಿ ಪೀಠದ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಸವ ಸಂಸ್ಕೃತಿ ಯಾತ್ರೆಯ ಸಂದರ್ಭದಲ್ಲಿ ಸಾಣೆಹಳ್ಳಿ ತರಳಬಾಳು ಮಠದ ಶ್ರೀಗಳು ಲಿಂಗಾಯತ ಮತ್ತು ಮುಸ್ಲಿಂ ಧರ್ಮಗಳು ಒಂದೇ ಎನ್ನುವ ಅನಿಸಿಕೆ ವ್ಯಕ್ತಪಡಿಸಿದ್ದರು. ಈ ಯಾತ್ರೆಗೆ ತಮ್ಮ ವಿರೋಧ ಇಲ್ಲ. ಆದರೆ, ಅಲ್ಲಿ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಬೇಡಿ ಎಂದು ಯಾತ್ರೆಯ ಭಾಗಿದಾರರಿಗೆ ಪಂಚಮಸಾಲಿ ಮಠದ ಶ್ರೀಗಳು ಮನವಿ ಮಾಡಿದ್ದಾರೆ.



