ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ರಾಜ್ಯ ಸರಕಾರದ ಆರ್ಥಿಕ ಪರಿಸ್ಥಿತಿಯ ನೆಪ ಇಟ್ಟುಕೊಂಡು 9 ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಹೊರಟಿರುವ ಸರಕಾರದ ಕ್ರಮವನ್ನು ಪ್ರತಿಭಟಿಸಿ ಮಂಗಳವಾರ ಪಟ್ಟಣದಲ್ಲಿ ಎಬಿವಿಪಿ ಕಾರ್ಯಕರ್ತರು ಭಿಕ್ಷಾಟನೆ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಎಬಿವಿಪಿ ನಗರ ಕಾರ್ಯದರ್ಶಿ ಅಭಿಷೇಕ ಉಮಚಗಿ, ಸರಕಾರ ಆರ್ಥಿಕ ಪರಿಸ್ಥಿತಿಯ ನೆಪ ಇಟಕೊಂಡು 9 ವಿಶ್ವವಿದ್ಯಾಲಯಗಳನ್ನ ಮುಚ್ಚುಲು ಹೊರಟಿದ್ದು, ಈ ನಿರ್ಧಾರವನ್ನು ಎಬಿವಿಪಿ ಖಂಡಿಸುತ್ತದೆ. ರಾಜ್ಯ ಸರಕಾರ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಗ್ಯಾರಂಟಿಗೆ ಹಣ ಒದಗಿಸಲಾಗದೆ ವಿಶ್ವವಿದ್ಯಾಲಯಗಳಿಗೆ ಆರ್ಥಿಕ ಸಮಸ್ಯೆಯ ನೆಪ ಮಾಡಿಕೊಂಡು ಮುಚ್ಚುವ ನಿರ್ಧಾರ ಮಾಡಿದ್ದು ಖಂಡನೀಯ. ಕೂಡಲೇ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ತಾಲೂಕಾ ಸಂಚಾಲಕ ಪ್ರಕಾಶ್ ಕುಂಬಾರ, ಸಹ ಸಂಚಾಲಕ ವಿನಯ್ ಸಪಡ್ಲ, ಯಶ್ವಂತ್ ಶಿರಹಟ್ಟಿ, ಮನೋಜ್ ತಂಡಿಗೇರ, ವಿನಾಯಕ ಕುಂಬಾರ, ಅಭಿಷೇಕ್ ಇಸನಗೌಡರ, ವಿನಾಯಕ ಹುಂಬಿ, ಅರವಿಂದ ಇಚ್ಚಂಗಿ, ಯುವರಾಜ್ ದುರ್ಗದ, ಈರಣ್ಣ ಕುಂಬಾರ ಸೇರಿದಂತೆ ಎಬಿವಿಪಿ ಕಾರ್ಯಕರ್ತರು ಇದ್ದರು.