ಶ್ರೀನಗರ: ರಾಕ್ಷಸ ರಾಷ್ಟ್ರ ಪಾಕಿಸ್ತಾನದ ಬಳಿ ಪರಮಾಣು ಅಸ್ತ್ರ ಇರುವುದು ಸುರಕ್ಷಿತವಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬಾದಾಮಿ ಬಾಗ್ ಕಂಟೋನ್ಮೆಂಟ್ನಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ಧ ಭಾರತದ ಬದ್ಧತೆ ಎಷ್ಟರ ಮಟ್ಟಿಗೆ ಇದೆ ಎಂದರೆ, ಪಾಕಿಸ್ತಾನದ ಪರಮಾಣು ಬೆದರಿಕೆಗೆ ಭಾರತ ಬಗ್ಗುವುದಿಲ್ಲ.
ಪಾಕಿಸ್ತಾನವು ಭಾರತಕ್ಕೆ ಪರಮಾಣು ಬೆದರಿಕೆ ಹಾಕಿ ಹೇಗೆ ತನ್ನ ಬೇಜವಾಬ್ದಾರಿತನ ಮೆರೆದಿದೆ ಎಂಬುದನ್ನು ಜಗತ್ತೇ ನೋಡಿದೆ. ಇಂತಹ ಬೇಜವಾಬ್ದಾರಿ ಮತ್ತು ದುಷ್ಟ ರಾಷ್ಟ್ರದ ಕೈಯಲ್ಲಿ ಪರಮಾಣು ಆಯುಧಗಳು ಸುರಕ್ಷಿತವಾಗಿವೆಯೇ ಎಂಬುದನ್ನು ಜಾಗತಿಕ ಸಮುದಾಯ ಚಿಂತಿಸಬೇಕು ಎಂದು ರಕ್ಷಣಾ ಸಚಿವರು ಆಗ್ರಹಿಸಿದರು.
ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಇಡಬೇಕು. ಆ ರಾಷ್ಟ್ರ ತನ್ನ ಪರಮಾಣು ಶಸ್ತ್ರಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆಯೇ ಎಂಬುದನ್ನು ಜಾಗತಿಕ ನಾಯಕತ್ವ ಪರಿಶೀಲಿಸಬೇಕು ಎಂದು ರಾಜನಾಥ್ ಸಿಂಗ್ ಇದೇ ವೇಳೆ ಒತ್ತಾಯಿಸಿದರು.