ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ದಶಕಗಳಿಂದಲೂ ಸಡ್ಡುಹೊಡೆಯುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಕಾಂಗ್ರೆಸ್ ಸರ್ಕಾರ ದಕ್ಕಿಲ್ಲದೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಗದಗ ಜಿಲ್ಲಾ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು, ದಸರಾ ಹಬ್ಬದ ವೇಳೆಯಲ್ಲಿಯೇ ನೀರಿನ ಕೊರತೆ ತೀವ್ರವಾಗಿ ವ್ಯಕ್ತವಾಗಿತ್ತು. ಇದೀಗ ದೀಪಾವಳಿಯಂತಹ ಪ್ರಮುಖ ಹಬ್ಬದ ಸಂದರ್ಭದಲ್ಲಿ ಕೂಡ ಸಮರ್ಪಕ ನೀರು ದೊರೆಯದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ.
“ಹಬ್ಬದ ಸಮಯದಲ್ಲೂ ಜನರ ಮನೆಯಲ್ಲಿ ನೀರು ಇಲ್ಲದಿರುವುದು ನಮ್ಮ ದುರ್ದೈವ. ಜನರು ಈಗ ಕಾಂಗ್ರೆಸ್ ಸರ್ಕಾರಕ್ಕೂ ಶಾಸಕ ಎಚ್.ಕೆ. ಪಾಟೀಲರಿಗೂ ಹಿಡಿಶಾಪ ಹಾಕುತ್ತಿದ್ದಾರೆ,” ಎಂದು ಅವರು ತೀವ್ರ ನಿಟ್ಟಿನಲ್ಲಿ ವಾಗ್ದಾಳಿ ನಡೆಸಿದರು.
ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಇಲ್ಲಿಯೂ ಮುಂದಿನ ಹಂತಗಳಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದರು.