ವಿಜಯಸಾಕ್ಷಿ ಸುದ್ದಿ, ಗದಗ: ಬದಲಾಗುತ್ತಿರುವ ಕುಟುಂಬ ರಚನೆಗಳು, ಜೀವನ ಶೈಲಿ, ಆಧುನೀಕರಣದತ್ತ ಒಲವು, ಹಿರಿಯರ ಬಗೆಗೆ ನಿರ್ಲಕ್ಷ್ಯ ಭಾವನೆ ಇವುಗಳಿಂದಾಗಿ ವೃದ್ಧಾಶ್ರಮಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವದು ವಿಷಾದನೀಯ ಎಂದು ಜೇಂಟ್ಸ್ ಗ್ರೂಪ್ ಆಫ್ ಸಖಿ ಸಹೇಲಿ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.
ಅವರು ಬೆಟಗೇರಿಯ ಶಿವರತ್ನ ವೃದ್ಧಾಶ್ರಮದಲ್ಲಿ ವೃದ್ಧಾಶ್ರಮದ ಹಿರಿಯರನ್ನು ಗೌರವಿಸಿ ಮಾತನಾಡಿದರು. ವೃದ್ಧರಿಗೆ ವಯೋಸಹಜ ಕಾಯಿಲೆಗಳು, ಸಣ್ಣ ಮಗುವಿನ ಸ್ವಭಾವ ಅವರಲ್ಲಿ ಕಂಡು ಬರುತ್ತದೆ. ಹಿರಿಯರು ಅನುಭವದ ಆಗರವಾಗಿದ್ದಾರೆ. ವಿಶೇಷ ಕಾಳಜಿ ಮತ್ತು ಗಮನ ಅತ್ಯವಶ್ಯಕ. ಅವರು ತಮ್ಮನ್ನು ಪ್ರೀತಿಸುವ ಹಾಗೂ ಆರೈಕೆ ಮಾಡುವವರಿಗಾಗಿ ಹಂಬಲಿಸುತ್ತಾರೆ. ಹಿರಿಯರಿದ್ದರೆ ಮನೆ ಚೆಂದ. ಅನುಭವದೊಂದಿಗೆ ಮನೆಯನ್ನು ರಕ್ಷಣೆ ಮಾಡುವ ಹಿರಿಯರು ನಮಗೆಲ್ಲ ಆದರ್ಶಪ್ರಾಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಂದ್ರಕಲಾ ಸ್ಥಾವರಮಠ, ಹಿಂದೆ ವಯಸ್ಕ ಮಕ್ಕಳು ತಮ್ಮ ವಯಸ್ಸಾದ ತಂದೆ-ತಾಯಿಗಳನ್ನು ಪೋಷಿಸುವ, ಗೌರವಿಸುವ ಹಾಗೂ ಯಜಮಾನಿಕೆ ನೀಡಿ ಅವರ ಆಜ್ಞೆ ಪಾಲಿಸುವ ಕಾಲವಿತ್ತು. ಯುವ ಪೀಳಿಗೆ ಹೆಚ್ಚು ಸ್ವತಂತ್ರರಾಗುತ್ತಿದ್ದಂತೆ ಹಿರಿಯರ ಬಗೆಗಿನ ಚಿಂತನೆಗಳು ಬದಲಾಗಿವೆ ಎಂದರು.
ಇನ್ನೋರ್ವ ಅತಿಥಿ ಸುಗ್ಗಲಾ ಯಳಮಲಿ ಮಾತನಾಡಿ, ಹಿರಿಯರು ಮನೆಯಲ್ಲಿದ್ದರೆ ಆ ಮನೆ ನೆಮ್ಮದಿಯ ತಾಣ. ಮಕ್ಕಳಿಗೆ ಪಾಲಕರಾಗಿ, ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜ-ಅಜ್ಜಿಯಾಗಿ ಇರುವ ಇವರು ನಾವೆಲ್ಲರೂ ಮನೆಯ ಕಾರ್ಯಗಳನ್ನು ಹಾಗೂ ಬದುಕನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿದ್ದಿ ತೀಡುವ ಗುರುಗಳು ಎಂದರು.
ಅಶ್ವಿನಿ ಮಾದಗುಂಡಿ ಪ್ರಾರ್ಥಿಸಿದರು, ಶಾಂತಾ ತುಪ್ಪದ ಸ್ವಾಗತಿಸಿದರು. ರೇಖಾ ರೊಟ್ಟಿ ಪರಿಚಯಿಸಿದರು, ಶ್ರೀದೇವಿ ಮಹೇಂದ್ರಕರ ನಿರೂಪಿಸಿದರು, ಸುಷ್ಮಿತಾ ವೇರ್ಣೆಕರ ವಂದಿಸಿದರು.
ಕಾರ್ಯಕ್ರಮದಲ್ಲಿ ಶಶಿಕಲಾ ಮಾಲೀಪಾಟೀಲ, ಮಂಜುಳಾ ಲಕ್ಕುಂಡಿ, ನಿರ್ಮಲಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಬಾಕ್ಸ್
ಮುಖ್ಯ ಅತಿಥಿ ವಿದ್ಯಾ ಶಿವನಗುತ್ತಿ ಮಾತನಾಡಿ, ಆರ್ಥಿಕ ಬೆಂಬಲದ ಕೊರತೆ ಹಾಗೂ ಸಾಂಪ್ರದಾಯಿಕ ಅವಿಭಕ್ತ ಕುಟುಂಬ ವ್ಯವಸ್ಥೆಯು ಮುರಿದು ಬೀಳುವುದು ವೃದ್ಧರನ್ನು ಪ್ರತ್ಯೇಕವಾಗಿಸುತ್ತದೆ. ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಬದಲು ತಮ್ಮ ಮನೆಯಲ್ಲಿಯೇ ಅವರಿಗೆ ಪ್ರೀತಿ ತೋರಿಸಿದರೆ ಇಳಿವಯಸ್ಸಿನಲ್ಲಿ ಅವರಿಗೆ ನೆಮ್ಮದಿ ಸಿಗುತ್ತದೆ ಎಂದರು.



