ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಶ್ರೀಕ್ಷೇತ್ರ ಹರ್ತಿ ಗ್ರಾಮದಲ್ಲಿ ಜನವರಿ 2ರಿಂದ 13ರವರೆಗೆ ಪ್ರತಿದಿನ ಸಂಜೆ 6.30ರಿಂದ 8 ಗಂಟೆಯವರೆಗೆ ಹಿರೇವಡ್ಡಟ್ಟಿ–ಮಣಕವಾಡ ದೇವಮಂದಿರ ಮಹಾಮಠದ ಪೂಜ್ಯಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ `ವಚನ ದರ್ಶನ’ ಆಧ್ಯಾತ್ಮಿಕ ಪ್ರವಚನ ಜರುಗುಲಿದೆ.
ಜ. 2ರಂದು ಬೆಳಿಗ್ಗೆ 7 ಗಂಟೆಗೆ ಹರ್ತಿ ಗ್ರಾಮದ ಬಸವಣ್ಣ ದೇವಸ್ಥಾನದಲ್ಲಿ ಶ್ರೀ ಬಸವಣ್ಣ ದೇವರಿಗೆ ರುದ್ರಾಭಿಷೇಕ, ಪ್ರಜೆ, ನಂತರ ಪ್ರಸಾದ ವಿತರಣೆ ಜರುಗುವದು. ಸಂಜೆ 4 ಗಂಟೆಗೆ `ಬಸವ ಬುತ್ತಿ’ ಶ್ರೀ ಬಸವಣ್ಣನವರ ವಚನ ಗ್ರಂಥಗಳ ಮೆರವಣಿಗೆಯು ಶ್ರೀ ತ್ರಿಲಿಂಗೇಶ್ವರ ದೇವಸ್ಥಾನದಿಂದ ಪ್ರಾರಂಭಗೊAಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪ್ರವಚನದ ವೇದಿಕೆಗೆ ಆಗಮಿಸುವದು. ಈ ಮೆರವಣಿಗೆಯಲ್ಲಿ ಭಜನಾ ಮೇಳ, ಶ್ರೀ ವೀರಭದ್ರೇಶ್ವರ ಪುರವಂತರ ಗಗ್ಗರಿ ಕೋಲು ಮೇಳ, ಕರಡಿ ಮಜಲು ಮುಂತಾದ ವಾದ್ಯ ತಂಡಗಳು ಪಾಲ್ಗೊಳ್ಳಲಿವೆ.
ಸಂಜೆ 6.30 ಗಂಟೆಗೆ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅಡ್ನೂರ-ಗದಗ-ರಾಜೂರು ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸುವರು. ಹಿರೇವಡ್ಡಟ್ಟಿ–ಮಣಕವಾಡ ದೇವಮಂದಿರ ಮಹಾಮಠದ ಪೂಜ್ಯಶ್ರೀ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಪ್ರವಚನ ಮಾಡುವರು.
ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಗದಗ-ಹಾವೇರಿ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಶಿರಹಟ್ಟಿಯ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಗಣ್ಯ ಉದ್ಯಮಿ ವಿಜಯಕುಮಾರ ಗಡ್ಡಿ, ಕುರಹಟ್ಟಿಯ ಕೃಷಿ ಉಪಕರಣಗಳ ತಜ್ಞರಾದ ಡಿ.ಕೆ. ಲಕ್ಕಣ್ಣವರ ಮುಂತಾದವರು ಆಗಮಿಸುವರು.
ಜ. 3ರಿಂದ 13ರವರೆಗೆ ಹರ್ತಿ, ಕಣವಿ, ಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಪ್ರತಿದಿನ ಬೆಳಿಗ್ಗೆ 6ರಿಂದ 7 ಗಂಟೆಯವರೆಗೆ ಪೂಜ್ಯ ಶ್ರೀಗಳ ಪಾದಯಾತ್ರೆ ಜರಗುವದು. ಈ ಪಾದಯಾತ್ರೆಯಲ್ಲಿ ತ್ರಿಲಿಂಗೇಶ್ವರ ಭಜನಾ ಮಂಡಳಿ ಹಾಗೂ ಶರಣಬಸವೇಶ್ವರ ಭಜನಾ ಮಂಡಳಿಗಳು ಪಾಲ್ಗೊಳ್ಳಲಿವೆ ಎಂದು ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ಹಾಗೂ ಹರ್ತಿ ಗ್ರಾಮದ ಗುರು ಹಿರಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಚನ ಕಾರ್ಯಕ್ರಮದಲ್ಲಿ ಪ್ರತಿದಿನ ಕಲಬುರಗಿಯ ಸಂಗಮೇಶ ಪಾಟೀಲ ಅವರಿಂದ ಸಂಗೀತ ಸೇವೆ ನಡೆಯಲಿದ್ದು, ತೋಟೇಂದ್ರಕುಮಾರ ಕಟ್ಟಿಸಂಗಾವಿ ಅವರು ತಬಲಾ ಸಾಥ್ ನೀಡುವರು. ಇದೇ ಸಂದರ್ಭದಲ್ಲಿ ಗದುಗಿನ ಶ್ರೀರಾಜರಾಜೇಶ್ವರಿ ಕಲಾ ಕುಟೀರ ತಂಡದವರಿಂದ ನೃತ್ಯ ಕಾರ್ಯಕ್ರಮ ಹಾಗೂ ಹರ್ತಿಯ ಮಲ್ಲಿಕಾರ್ಜುನ ಭಜಂತ್ರಿ ಅವರಿಂದ ಶಹನಾಯಿ ವಾದನ ಕಾರ್ಯಕ್ರಮ ಜರುಗಲಿದೆ.