ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ದೇಶದ ಸಂಸ್ಕೃತಿ, ಕಲೆ, ವಾಸ್ತುಶಿಲ್ಪ, ಪರಂಪರೆಯ ಶ್ರೀಮಂತಿಕೆ ಹೆಚ್ಚಿಸುವಲ್ಲಿ ದೇವಮಾನವ ಅಮರಶಿಲ್ಪಿ ಜಕಣಾಚಾರ್ಯರ ಕೊಡುಗೆ ಅಜರಾಮರ ಎಂದು ತಹಸೀಲ್ದಾರ ವಾಸುದೇವ ಎಂ.ಸ್ವಾಮಿ ಹೇಳಿದರು.
ಅವರು ಬುಧವಾರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಜಕಣಾಚಾರ್ಯ ಸಂಸ್ಮರಣಾ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ವಿಶ್ವಕರ್ಮರ ಪಂಚ ಕಸುಬುಗಳು ಯಾವುದೇ ಧರ್ಮ, ಜಾತಿ, ಕುಲಕ್ಕೆ ಸೀಮಿತವಾಗಿರದೇ ನಾಗರಿಕರ ಬದುಕಿಗೆ ಆಧಾರಸ್ತಂಭವಾಗಿವೆ. ನಮ್ಮ ಸಂಸ್ಕೃತಿ, ಪರಂಪರೆ, ಇತಿಹಾಸ, ಕಲೆಯನ್ನು ತಮ್ಮ ಕೌಶಲ್ಯದ ಮೂಲಕ ಕಲ್ಲು, ಕಟ್ಟಿಗೆ ಇತರೆ ವಸ್ತುಗಳಲ್ಲಿ ಜೀವಂತವಾಗಿರಿಸಿದ್ದರಿಂದಲೇ ಅವರು ಅಮರಶಿಲ್ಪಿಯಾಗಿದ್ದಾರೆ. ಬೇಲೂರು-ಹಳೆಬೀಡುಗಳಂತಹ ವಿಶ್ವ ಶ್ರೇಷ್ಠ ಅನೇಕ ಶಿಲ್ಪಕಲಾ ದೇವಸ್ಥಾನಗಳ ನಿರ್ಮಾಣ ಕಾರ್ಯಕ್ಕೆ ತಮ್ಮನ್ನೇ ಸಮರ್ಪಿಸಿಕೊಂಡ ದೇವಮಾನವರ ಸ್ಮರಣೆ ಮುಖ್ಯವಾಗಿದೆ ಎಂದರು.
ಈ ವೇಳೆ ಸೂರಣಗಿ ಗ್ರಾಮದ ಮೌನೇಶ ಚನ್ನಪ್ಪ ಬಡಿಗೇರ ಅವರ ವೃತ್ತಿ ಸೇವೆ ಪರಿಗಣಿಸಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕ ಘಟಕದಿಂದ `ಅಮರಶಿಲ್ಪಿ ಜಕಣಾಚಾರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜದ ತಾಲೂಕಾಧ್ಯಕ್ಷ ಈರಣ್ಣ ಬಡಿಗೇರ, ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಬಾಸ್ಕರ್ ಸೊರಟೂರ, ರಾಮಚಂದ್ರ ಬಡಿಗೇರ, ಗಂಗಾಧರ ಬಾಲೆಹೊಸೂರ, ಮೋಹನ್ ಸುತಾರ, ಮೌನೇಶ ಬಾಲೆಹೊಸೂರ, ದೇವಿಂದ್ರಪ್ಪ ಬಾಲೆಹೊಸುರ, ಧರ್ಮಣ್ಣ ಬಡಿಗೇರ, ಗಣೇಶಪ್ಪ ಹುಲಬಜಾರ, ಅಶೋಕ ಸೊರಟೂರ, ಬಸಣ್ಣ ಬಡಿಗೇರ, ಶ್ರೀಧರ್ ಪತ್ತಾರ, ಪ್ರೇಮಕ್ಕ ಬಡಿಗೇರ, ಶಶಿಕಲಾ ಬಡಿಗೇರ, ಉಮ್ಮಕ್ಕ ಸೊರಟೂರ, ಭಾಗ್ಯಶ್ರೀ ಬಡಿಗೇರ, ಶ್ರೀಕಾಂತ ಪತ್ತಾರ, ರಮೇಶ ಬಡಿಗೇರ, ಮನೋಹರ್ ಪತ್ತಾರ ಸೇರಿ ಸಮಾಜ ಬಾಂಧವರು, ತಹಸೀಲ್ದಾರ ಕಚೇರಿ ಸಿಬ್ಬಂದಿಗಳು ಇದ್ದರು.
ವಿಶ್ವಕರ್ಮ ಸಮಾಜದ ಗುರುಗಳಾದ ಸೂರಣಗಿಯ ಭಾಸ್ಕರ್ ಸ್ವಾಮೀಜಿ ಮಾತನಾಡಿ, ದೇಶದ ಸಾಂಸ್ಕೃತಿಕ, ಧಾರ್ಮಿಕ ಲೋಕದ ಶ್ರೀಮಂತಿಕೆಗೆ ಕಾರಣರಾದ ಜಕಣಾಚಾರ್ಯರ ಕುರಿತ ಅಧ್ಯಯನ, ಸಂಶೋಧನೆಗೆ ಸರ್ಕಾರ ಮುಂದಾಗಬೇಕು. ವಿಶ್ವಕರ್ಮ ಸಮಾಜದ ಯುವಕರು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಾಯ-ಸಹಕಾರ, ಅವಕಾಶ ಕಲ್ಪಿಸಬೇಕು. ಜಕಣಾಚಾರ್ಯರ ಸಂಸ್ಮರಣಾ ದಿನವನ್ನು ಸರ್ಕಾರವೇ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.