ವಿಜಯಸಾಕ್ಷಿ ಸುದ್ದಿ, ಗದಗ: 12ನೇ ಶತಮಾನದಲ್ಲಿ ಶರಣರ ಅನುಭವ ಮಂಟಪದಲ್ಲಿ ನಿಷ್ಠುರವಾಗಿ ಮಾತನಾಡುವ ಶರಣ ಎಂದರೆ ಅಂಬಿಗರ ಚೌಡಯ್ಯ. ಎಲ್ಲ ಶರಣರಲ್ಲಿ ನಿಜಶರಣ ಎಂದು ಖ್ಯಾತಿ ಪಡೆದ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಈ ಬಾರಿ ಜನವರಿ 21ರಂದು ಅದ್ಧೂರಿಯಾಗಿ ಆಚರಿಸಲು ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಸಂಘಟನೆಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯ ಸಮಾಜ ಸಂಘಟನೆಯ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ಸಭೆಯಲ್ಲಿ ಮಾತನಾಡಿ, ಈ ಬಾರಿ ಜಯಂತಿಗೆ ನಗರದ ಗಣ್ಯ ಮಹನೀಯರನ್ನು ಆಹ್ವಾನಿಸಲಾಗುವುದು. ಬೈಕ್ ರ್ಯಾಲಿ, ಡೊಳ್ಳಿನ ಮೆರವಣಿಗೆ, ಕುಂಭ ಮೇಳ ಜರುಗುವುದು. ಕಾರಣ, ಸಮುದಾಯದ ಎಲ್ಲರೂ ಭಾಗವಹಿಸುವಂತೆ ಕರೆ ನೀಡಿದರು.
ಸಮಾಜ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಗದಗ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯ, ದೌರ್ಜನ್ಯ ಸಮಿತಿ ಸದಸ್ಯರಾದ ಸಂಗಮೇಶ ಹಾದಿಮನಿ ಮಾತನಾಡಿ, ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಜಯಂತಿಯನ್ನು 2020ರಿಂದ 2025ರವರೆಗೆ ಸರಳ ರೀತಿಯಲ್ಲಿ ಆಚರಿಸಿಕೊಂಡು ಬರಲಾಗಿತ್ತು. ಪ್ರಸ್ತುತ ಜನವರಿ 21ರಂದು ಅದ್ಧೂರಿ ಜಯಂತಿ ಆಚರಿಸಲು ತೀರ್ಮಾನಿಸಲಾಗಿದ್ದು, ಸಮಾಜದ ಯುವಕರು, ಹಿರಿಯರು, ಮಹಿಳೆಯರು ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿಸಿದರು.
ಈ ಸಂದರ್ಭದಲ್ಲಿ ಆನಂದ ಸುಣಗಾರ, ಬಸವರಾಜ ಗುಡಿಸಾಗರ, ಸುಜಾತಾ ಗುಡಿಸಾಗರ, ಪ್ರವೀಣ ನೀಲಣ್ಣವರ, ರವಿಕುಮಾರ ಗುಡಿಸಾಗರ, ಮಂಜುನಾಥ ಗುಡಿಸಾಗರ, ರಾಜು ಪೂಜಾರ, ಶಿವದೇವ ಹಾದಿಮನಿ, ಮುತ್ತು ಅಂಬಿಗೇರ, ಮಲ್ಲು ಬಾರಕೇರ, ಸುದೀಪ ಕಮತರ, ರಾಜು ಬಿನ್ನಾಳ, ದೇವು ನವಲಗುಂದ, ಹರೀರ ಬಾರಕೇರ, ಗುರು ತಿರ್ಲಾಪೂರ ಮುಂತಾದವರು ಉಪಸ್ಥಿತರಿದ್ದರು.



