ವಿಜಯಸಾಕ್ಷಿ ಸುದ್ದಿ, ರೋಣ : ಪಟ್ಟಣದ ಗುರುಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕಾ ಮಟ್ಟದ ಜನಸ್ಪಂದನ ಸಭೆ ಜರುಗಿತು. ಮಲ್ಲಾಪೂರ ಸೇರಿದಂತೆ ರೋಣ ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಆಕ್ರಮ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಿದ್ದರೂ ಸಹ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ನೀಲಪ್ಪಗೌಡ ದಾನಪ್ಪಗೌಡ್ರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರಿಗೆ ದೂರು ಸಲ್ಲಿಸಿದರು.
ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಆಕ್ರಮ ಸಾರಾಯಿ ಮಾರಾಟ, ಮಟ್ಕಾ, ಇಸ್ಪಿಟ್ ಇತ್ಯಾದಿ ಆಕ್ರಮ ದಂಧೆಗಳು ನಡೆಯುತ್ತಿವೆ. ಈ ಬಗ್ಗೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಆಕ್ರಮ ದಂಧೆಗಳಿಗೆ ಕಡಿವಾಣ ಹಾಕಬೇಕು ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಸ್ವೀಕೃತವಾದ 109 ಅರ್ಜಿಗಳಲ್ಲಿ ಸಿಂಹಪಾಲು ಸರ್ವೇ ಇಲಾಖೆಯದ್ದೇ ಆಗಿದ್ದವು. ಇದರಿಂದ ಬೇಸರಗೊಂಡ ಜಿಲ್ಲಾಧಿಕಾರಿಗಳು, ಸರ್ವೇ ಇಲಾಖೆಯವರು ಏನು ಮಾಡುತ್ತಿದ್ದೀರಿ, ಎಲ್ಲ ಅರ್ಜಿಗಳು ನಿಮ್ಮ ಇಲಾಖೆಗೆ ಸಂಬಂಧಿಸಿದ್ದು, ಈ ಕೂಡಲೇ ಸ್ವೀಕೃತಿಗೊಂಡಿರುವ ಅರ್ಜಿಗಳ ಸಮಸ್ಯೆಗಳನ್ನು ಬಗೆಹರಿಸಿ ಎಂದು ಎಚ್ಚರಿಸಿದರು.
ಎಸ್ಪಿ ಬಿ.ಎಸ್. ನೇಮಗೌಡ, ಜಿ.ಪಂ ಸಿಇಓ ಭರತ್ ಎಸ್, ಪುರಸಭೆಯ ಉಪಾದ್ಯಕ್ಷ ಸಂಗನಗೌಡ ಪಾಟೀಲ, ತಹಸೀಲ್ದಾರ್ ನಾಗರಾಜ ಕೆ, ತಾ.ಪಂ ಇಒ ಇನಾಮದಾರ, ಬಿಇಒ ರುದ್ರಪ್ಪ ಹುರಳಿ, ಬಸವರಾಜ ಅಂಗಡಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
ರೋಣ ಪುರಸಭೆಯ ಸದಸ್ಯರು ಸಂಗನಗೌಡ ಪಾಟೀಲ ನೇತೃತ್ವದಲ್ಲಿ, ಸ್ಮಶಾನ ರಸ್ತೆ ಸಮಸ್ಯೆಯನ್ನು ಮೊದಲು ಬಗೆಹರಿಸಿ, ಅಬ್ಬಿಗೇರಿ ರಸ್ತೆಯಲ್ಲಿರುವ ವಾಜಪೇಯಿ ಶಾಲೆಯ ಅಭಿವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.