ಬೀದರ್:- ವೃತ್ತಿಪರ ಕೋರ್ಸ್ಗಳ ಆಯ್ಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಶನಿವಾರ ಜನಿವಾರ ಧರಿಸಿದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿಲ್ಲ. ಇದು ವ್ಯಾಪಕ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಾಯಿ ಸ್ಪೂರ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮತ್ತು ಎಸ್ಡಿಎ ಸಿಬ್ಬಂದಿಯನ್ನು ಕೆಲಸದಿಂದಲೇ ವಜಾ ಮಾಡಲಾಗಿದೆ. ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲಾಧಿಕಾರಿ, ಪ್ರಾಂಶುಪಾಲ ಚಂದ್ರಶೇಖರ್ ಬಿರಾದರ್ ಮತ್ತು ಎಸ್ಡಿಎ ಸತೀಶ ಪವಾರ್ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದರು. ಡಿಸಿಯಿಂದ ಆದೇಶ ಬಂದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಇಬ್ಬರನ್ನು ಕೆಲಸದಿಂದ ವಜಾ ಮಾಡಿದೆ.
ಖಾಸಗಿ ಕಾಲೇಜು ಆಗಿರುವ ಕಾರಣ ಶಾಲಾ ಆಡಳಿತ ಮಂಡಳಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಸೂಚಿಸಿತ್ತು. ಹೀಗಾಗಿ ಸಾಯಿ ಸ್ಪೂರ್ತಿ ಪದವಿ ಪೂರ್ವ ಕಾಲೇಜ್ ಇಬ್ಬರನ್ನು ತಕ್ಷಣದಿಂದಲೇ ವಜಾ ಮಾಡಿದೆ.