ಬೆಂಗಳೂರು:- ಜನಿವಾರ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವಧಿಯಲ್ಲಿ ಬ್ರಾಹ್ಮಣರು ಸಾಫ್ಟ್ ಟಾರ್ಗೆಟ್. ಬ್ರಾಹ್ಮಣರ ಸಂಖ್ಯೆ ಬಹಳ ಕಡಿಮೆ ಇದೆ. ಅವರು ಪ್ರತಿರೋಧ ತೋರುವುದಿಲ್ಲ ಎಂಬ ಭಾವನೆ ಸಿದ್ದರಾಮಯ್ಯ ಅವರಿಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಉಡುಪಿಯ ಹಿಜಾಬ್ ವಿಚಾರ ಬಂದಾಗ ಸಿದ್ದರಾಮಯ್ಯ ಪ್ರಬಲವಾಗಿ ಪ್ರತಿಪಾದಿಸಿದರು. ಈಗ ಯಾಕೆ ಜನಿವಾರ ಪ್ರಕರಣದಲ್ಲಿ ಸಿದ್ದರಾಮಯ್ಯ ಸುಮ್ಮನಿದ್ದಾರೆ? ಜನಿವಾರದಲ್ಲಿ ಏನಾದ್ರೂ ಲೋಪ ಕಾಣುತ್ತಿದ್ಯಾ ಎಂದು ಪ್ರಶ್ನಿಸಿದರು. ಜಾತಿ ಜನಗಣತಿಯಲ್ಲೂ ಬ್ರಾಹ್ಮಣರ ಸಂಖ್ಯೆ ಕಡಿಮೆ ತೋರಿಸಲಾಗಿದೆ, ಅವರೇನೂ ಹೇಳಲ್ಲ ಅಂತನಾ? ಜನಿವಾರವೇ ಒಂದು ಸಮಸ್ಯೆ ಅಂತ ಅನ್ಕೊಂಡು ಜನಿವಾರವನ್ನೇ ತೆಗೆಸುವ ಕೆಲಸ ಆಗಿದೆ. ಇದು ಹಿಂದೂಗಳ ಮೇಲಿನ ಆಕ್ರಮಣ. ಹಿಂದೂ ಸಮಾಜ ಒಟ್ಟಾಗಿ ಜನಿವಾರ ಪ್ರಕರಣ ವಿರೋಧಿಸಬೇಕು ಎಂದು ಹೇಳಿದರು.