ಬೆಂಗಳೂರು:- ಬಿಜೆಪಿ-ಕಾಂಗ್ರೆಸ್ ಪಕ್ಷಗಳನ್ನು ಓವರ್ ಟೇಕ್ ಮಾಡಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜೆಡಿಎಸ್ ಯಾವತ್ತೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರೋಕೆ ಸಾಧ್ಯವೇ ಇಲ್ಲ. ಕುಮಾರಸ್ವಾಮಿ ನಮ್ಮನ್ನ ಹೊಗಳೋದಿಲ್ಲ. ಅವರು ವಿಪಕ್ಷದಲ್ಲಿ ಇದ್ದಾರೆ. ಅವರಿಗೆ ಅಧಿಕಾರ ಕೊಟ್ಟಾಗ ಏನು ಮಾಡಲಿಲ್ಲ. 2018ರಲ್ಲಿ ಪೂರ್ಣ ಪ್ರಮಾಣದ ಬಹುಮತ ಬಾರದೇ ಹೋದರೆ, ಪಕ್ಷ ವಿಸರ್ಜನೆ ಮಾಡ್ತೀನಿ ಅಂದ್ರು, ಮಾಡಿದ್ರಾ? 2023ರಲ್ಲೂ ಅದೇ ಹೇಳಿದ್ರು. ನಾನು ಯಾರ ಜೊತೆ ಮೈತ್ರಿಗೆ ಹೋಗಲ್ಲ ಅಂದ್ರು. ಜೆಡಿಎಸ್ ಪಕ್ಷ ಬಿಜೆಪಿ, ಕಾಂಗ್ರೆಸ್ನ್ನು ಓವರ್ ಟೇಕ್ ಮಾಡಿ ಅಧಿಕಾರಕ್ಕೆ ಬರಲು ಆಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಬಿಜೆಪಿ, ಜೆಡಿಎಸ್ನ್ನು ಜನ ತಿರಸ್ಕಾರ ಮಾಡಿದ್ದಾರೆ. ಅವರಿಗೆ ಯಾವತ್ತು ಬಹುಮತ ಬಂದಿಲ್ಲ. ಬಹುಮತ ಬಾರದೇ ಇರೋರು ಮಾತಾಡೋದು ಗಾಳಿಯಲ್ಲಿ ಗುಂಡು ಹೊಡೆಯುವ ಹೇಳಿಕೆ ಅಲ್ವಾ? ಕುಮಾರಸ್ವಾಮಿ ಅವರು ಏನೇ ಹೇಳಿದ್ರು ನೀವು ಹಾಕ್ತೀರಾ. ಕುಮಾರಸ್ವಾಮಿ ನಾಯಕತ್ವ ಬಂದ ಮೇಲೆ ಯಾವತ್ತು ಬಹುಮತ ಬಂದಿಲ್ಲ ಎಂದಿದ್ದಾರೆ.
ಕುಮಾರಸ್ವಾಮಿ ಗೆಲ್ಲೋಕೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು. ಉಪ ಚುನಾವಣೆಯಲ್ಲಿ ನಮಗೆ ಜನ ಆಶೀರ್ವಾದ ಮಾಡಿದ್ರು. ಎಂಪಿ ಎಲೆಕ್ಷನ್ನಲ್ಲಿ 9 ಸ್ಥಾನ ಜಾಸ್ತಿ ಮಾಡಿಕೊಂಡಿದ್ದೇವೆ. ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಯಾರು ಮಾತಾಡಿಲ್ಲ. ಅವರನ್ನು ಯಾರು ಕಾಂಗ್ರೆಸ್ಗೆ ಕರೆದಿಲ್ಲ. ಕುಮಾರಸ್ವಾಮಿ ಅರೋಗ್ಯ ಚೆನ್ನಾಗಿ ಇರಲಿ. ಆರೋಗ್ಯಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಅವರ ತಂದೆ ಸಕ್ರಿಯವಾಗಿ ಇದ್ದಾರೆ. ಹೀಗಿದ್ರು ರಾಜ್ಯದಲ್ಲಿ ಜೆಡಿಎಸ್ ಶಕ್ತಿ ಕ್ಷೀಣವಾಗಿದೆ ಎಂದು ತಿಳಿಸಿದ್ದಾರೆ.