ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಕುರ್ತಕೋಟಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ `ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ/ ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ’ ಅಭಿಯಾನದಡಿ ಕಾಯಕ ಬಂಧುಗಳ, ಸ್ವ-ಸಹಾಯ ಸಂಘಗಳ ಸದಸ್ಯರ ಸಭೆ ನಡೆಸಲಾಯಿತು.
ಈ ವೇಳೆ ಗದಗ ತಾ.ಪಂ ಇಓ ಮಾಣಿಕರಾವ್ ಪಾಟೀಲ್ ಮಾತನಾಡಿ, ಏಪ್ರೀಲ್ 1ರಿಂದ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದ್ದು, ಕಾಯಕ ಬಂಧುಗಳು ಕೂಲಿಕಾರರಿಂದ ನಮೂನೆ 6 ಸಂಗ್ರಹಿಸಬೇಕು. ಕಳೆದ ವರ್ಷಕ್ಕಿಂತ ಈ ವರ್ಷ ಬೇಗನೆ ಕೆಲಸ ನೀಡುವ ಮೂಲಕ ಗುಳೆ ತಪ್ಪಿಸಿ ಸ್ಥಳಿಯವಾಗಿ ಕೆಲಸ ನೀಡಲಾಗುತ್ತಿದೆ ಎಂದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕೂಲಿಕಾರರಿಗೆ ಉದ್ಯೋಗ ಕೊಡಲಿದ್ದು, ತಾವು ತಮ್ಮ ಕೂಲಿಕಾರರ ಆಧಾರ ಸಂಖ್ಯೆಗೆ ಬ್ಯಾಂಕ್ ಖಾತೆ ಸಂಖ್ಯೆ ಲಿಂಕ್ ಹಾಗೂ ಉದ್ಯೋಗ ಚೀಟಿ NCPI ಲಿಂಕ್ ಕಡ್ಡಾಯವಾಗಿ ಮಾಡಿಸಬೇಕು. ಕೆಲಸದ ಸ್ಥಳಗಳಲ್ಲಿ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ, ನೆರಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಬಾರಿ ಕೂಲಿಕಾರರು ಕೆಲಸದ ಸ್ಥಳದಲ್ಲಿ ಮಕ್ಕಳನ್ನು ಕರೆತರಬಾರದು. ಅದಕ್ಕಾಗಿ ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ನಮ್ಮ ಗ್ರಾ.ಪಂನಿಂದ ಕೂಸಿನ ಮನೆ ಆರಂಭಿಸಿದ್ದು, ತಮ್ಮ ಮಕ್ಕಳನ್ನು ಅಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ತಾ.ಪಂ ಲೆಕ್ಕಧಿಕಾರಿ, ಗ್ರಾ.ಪಂ ಪಿಡಿಓ ನರೇಗಾ ಸಿಬ್ಬಂದಿಗಳು, ಕಾಯಕ ಬಂಧುಗಳು, ಸ್ವಸಹಾಯ ಸಂಘದ ಸದಸ್ಯರು, ಮತ್ತು ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.
ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಕುಮಾರ್ ಪೂಜಾರ್ ಮಾತನಾಡಿ, ಕೆಲಸದ ಸ್ಥಳದಲ್ಲಿ ಕೂಲಿಕಾರರ ಹಾಜರಾತಿಯನ್ನು ಎರಡು ಹಂತದಲ್ಲಿ NMMS ಆ್ಯಪ್ನಲ್ಲಿ ಸೆರೆಹಿಡಿಯಬೇಕು. ಕೂಲಿಕಾರರಿಗೆ ಯಾವುದೇ ತೋಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.


