ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ/ಶಿಗ್ಲಿ: ತಂತ್ರಜ್ಞಾನದ ಶಿಕ್ಷಣವು ಇಂದು ಆಧುನಿಕ ಜಗತ್ತನ್ನು ಆಳುತ್ತಿದ್ದು, ಇದರ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶೃದ್ಧೆ, ಏಕಾಗ್ರತೆ ರೂಢಿಸಿಕೊಂಡು ಸತತಾಭ್ಯಾಸದ ಮೂಲಕ ಉನ್ನತ ಗುರಿ ಸಾಧಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶಿಗ್ಲಿಯ ಪರಮೇಶ್ವರಪ್ಪ ಬಳಿಗಾರ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ವಿವಿಧ ಚಟುವಟಿಕೆಗಳ ಉದ್ಘಾಟನೆ, ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ಬಳಿಗಾರ ಕುಟುಂಬದಿಂದ ಕೊಡಮಾಡುವ 1 ಲಕ್ಷ ರೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರೇಷ್ಠವಾದುದನ್ನು ಸಾಧಿಸಿಲು ಏಕಾಗ್ರತೆಯಿಂದ ಶ್ರಮಿಸಬೇಕು. ನಮ್ಮ ಭವಿಷ್ಯದ ರೂವಾರಿಗಳು ನಾವೇ ಆಗಿದ್ದು, ಉನ್ನತ ಶಿಕ್ಷಣ, ಜ್ಞಾನ ಮತ್ತು ನಾಯಕತ್ವದ ಗುಣ ಬೆಳೆಸಿಕೊಂಡು ಸಮಾಜಮುಖಿಯಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ, ವಿದ್ಯೆಯ ಜೊತೆಗೆ ವಿನಯವು ವಿದ್ಯಾರ್ಥಿಗಳಲ್ಲಿ ಅವಶ್ಯಕವಾಗಿ ಬೆಳೆದು ಬರಬೇಕು. ಗುರು-ಹಿರಿಯರು, ತಂದೆ-ತಾಯಿಯರನ್ನು ಗೌರವದಿಂದ ಕಾಣಬೇಕು. ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ಸಾಧನೆಯ ತುಡಿತದತ್ತ ಸಾಗಬೇಕು. ವಿದ್ಯಾರ್ಥಿ ಮತ್ತು ಯುವ ಶಕ್ತಿ ನಾಡಿನ ಸಂಪತ್ತಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಎಸ್.ಟಿ. ಮುದಿಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ನಾಗರಾಜ ದ್ಯಾಮನಕೊಪ್ಪ, ಎನ್.ಎನ್. ನೆಗಳೂರ, ನಿವೃತ್ತ ಪ್ರಾಚಾರ್ಯ ಡಿ.ಪಿ. ಹೇಮಾದ್ರಿ, ಭರತ್ ಬಳಿಗಾರ, ಮಂಜುನಾಥ ದೇಸಾಯಿ, ಶ್ರೀನಿವಾಸ ಬದಾಮಿ, ನಟರಾಜ ಪವಾಡದ, ರವಿ ಕುಸನೂರ, ಗೋವಿಂದಸಾ ಬದಿ, ಬಸವರಾಜ ಡಂಬ್ರಳ್ಳಿ, ಮಾಂತೇಶ ತಳವಾರ ಸೇರಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಉಪನ್ಯಾಸಕರು ಇದ್ದರು.