ಕಪ್ಪತಗುಡ್ಡವನ್ನು ಕಾಳ್ಗಿಚ್ಚಿನಿಂದ ರಕ್ಷಿಸಲು ಕೈಜೋಡಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರತಿಯೊಬ್ಬ ಮನುಷ್ಯ ಉಸಿರಾಡಲು, ಬದುಕಲು ಕಾಡುಗಳನ್ನು ಅವಲಂಬಿಸಿರುತ್ತಾರೆ. ಕಾಡುಗಳ ಮಹತ್ವವನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಕಾಡುಗಳು ಪ್ರಾಣಿಗಳು ಮತ್ತು ಜನರಿಗೆ ಜೀವನೋಪಾಯವನ್ನು ಒದಗಿಸುವುದರ ಜೊತೆಗೆ ಜಲಾನಯನ ಪ್ರದೇಶಗಳನ್ನು ರಕ್ಷಿಸುತ್ತದೆ. ಮಣ್ಣಿನ ಸವೆತವನ್ನು ತಡೆಯುವ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸುವ ಮಹತ್ತರ ಕೆಲಸ ಮಾಡುವ ಕಪ್ಪತ್ತಗುಡ್ಡದ ಪರಿಸರವನ್ನು ಬೆಂಕಿಯಿಂದ ಸಂರಕ್ಷಣೆ ಮಾಡಲು ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ಮುಂಡರಗಿ-ಕಪ್ಪತ್ತಗುಡ್ಡ ವಲಯದ ಆರ್‌ಎಫ್‌ಓ ಮಂಜುನಾಥ ಮೇಗಲಮನಿ ಹೇಳಿದರು.

Advertisement

ಡಂಬಳ ಹೋಬಳಿಯ ಗ್ರಾಮಗಳಲ್ಲಿ ಮುಂಡರಗಿ-ಕಪ್ಪತ್ತಗುಡ್ಡ ವಲಯ ಅರಣ್ಯ ಇಲಾಖೆಯ ವತಿಯಿಂದ ಚಿಕ್ಕವಡ್ಡಟ್ಟಿ, ಹತ್ತಿಕಟ್ಟಿ, ಡೋಣಿ ತಾಂಡ, ಡೋಣಿ, ಡಂಬಳ ಗ್ರಾಮದ ಕುರಿಗಾಹಿಗಳು, ದನಗಾಹಿಗಳು, ಕಾಡಂಚಿನ ರೈತರ ಜಮೀನುಗಳಿಗೆ ತೆರಳಿ ಕಪ್ಪತ್ತಗುಡ್ಡ ಅರಣ್ಯ ಬೆಂಕಿ ತಡೆಯಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಈ ಬಾರಿ ಕಪ್ಪತ್ತಗುಡ್ಡ ಅರಣ್ಯದಲ್ಲಿ ಕಾಳ್ಗಿಚ್ಚು ತಡೆಯಲು ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕಪ್ಪತ್ತಗುಡ್ಡದ ನಾಲ್ಕು ಶಾಖೆಗಳಲ್ಲಿ ಬೆಂಕಿ ರೇಖೆ ನಿರ್ಮಿಸಲಾಗಿದೆ. ವಾಚರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಡ್ರೋನ್ ಕ್ಯಾಮರಾದ ಮೂಲಕ ಹದ್ದಿನ ಕಣ್ಣು ಇಡಲಾಗಿದೆ. ಒಂದು ವೇಳೆ ಮೌಢ್ಯ ಆಚರಣೆಯ ಭಾಗವಾಗಿ ಕೆಲ ಕಿಡಗೇಡಿಗಳು ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದು ಕಂಡುಬಂದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದರು.

ಕಪ್ಪತ್ತಗುಡ್ಡ ಎಂದರೆ ಎಲ್ಲರ ಹೃದಯ ಕಾಪಾಡುವ ಒಡಲಾಗಿದ್ದು, ಎಲ್ಲರು ಕೂಡಿ ರಕ್ಷಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಬೆಂಕಿ ತಡೆಗೆ ಪ್ರತಿಯೊಬ್ಬ ನಾಗರಿಕರ ಸಹಕಾರ ಬಹಳ ಮುಖ್ಯ ಎಂದು ಹೇಳಿದರು.

ಜಾಗೃತಿ ಕಾರ್ಯಕ್ರಮದಲ್ಲಿ ಮುಂಡರಗಿ ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಹಾಗೂ ಸಿಬ್ಬಂದಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here