ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸ್ವಚ್ಛ ಭಾರತ ಮಿಷನ್ 2.0 ಭಾರತದಲ್ಲಿ ಶುಚಿತ್ವ ಮತ್ತು ನೈರ್ಮಲ್ಯವನ್ನು ಉತ್ತೇಜಿಸುವ ಒಂದು ರಾಷ್ಟ್ರೀಯ ಯೋಜನೆಯಾಗಿದ್ದು, ಮುಖ್ಯವಾಗಿ ತ್ಯಾಜ್ಯ ನಿರ್ವಹಣೆ, ಬಯಲು ಶೌಚಮುಕ್ತತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಘನ ತ್ಯಾಜ್ಯ ನಿರ್ವಹಣಾ ತಜ್ಞ ಕೊಟ್ರೇಶ ಹುಬ್ಬಳ್ಳಿ ಹೇಳಿದರು.
ಪಟ್ಟಣದ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶುಕ್ರವಾರ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಗದಗ ಜಿಲ್ಲಾಡಳಿತ, ಗದಗ ಜಿಲ್ಲಾ ನಗರಾಭಿವೃದ್ಧಿ ಕೋಶ, ಪಟ್ಟಣ ಪಂಚಾಯತಿ ನರೇಗಲ್ಲ ಹಾಗೂ ಹುಬ್ಬಳ್ಳಿಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ವಚ್ಛ ಭಾರತ ಮಿಷನ್ 2.0 ಮಾಹಿತಿ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಘನ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವುದು, ಕಸವನ್ನು ಕಡಿಮೆ ಮಾಡುವುದು, ಮರುಬಳಕೆ ಮಾಡುವುದು, ಮತ್ತು ವೈಜ್ಞಾನಿಕವಾಗಿ ಸಂಸ್ಕರಿಸುವುದು ಸ್ವಚ್ಛ ಭಾರತ ಮಿಷನ್ 2.0ನ ಮುಖ್ಯ ಗುರಿಗಳಾಗಿವೆ. ಕಸ ವಿಲೇವಾರಿಯಲ್ಲಿ ಮರು ಬಳಕೆ ಮಾಡಬಹುದಾದ ವಸ್ತುಗಳನ್ನು ಮರು ಬಳಕೆ ಮಾಡಲಾಗುವುದು. ಹಸಿ ಕಸವನ್ನು ಕಾಂಪೋಸ್ಟ್ ಮಾಡುವ ಮೂಲಕ ಮಣ್ಣನ್ನು ಸಮೃದ್ಧಗೊಳಿಸಬಹುದು. ಕಾರಣ ಎಲ್ಲರೂ ಸ್ವಚ್ಛ ಭಾರತ ಮಿಷನ್ 2.0ಗೆ ಕೈಜೋಡಿಸಿ ಸಹಕರಿಸಬೇಕು ಎಂದರು.
ಪ.ಪಂ ಸದಸ್ಯರಿಗೆ, ಸಿಬ್ಬಂದಿಗಳಿಗೆ ಹಾಗೂ ಪೌರಕಾರ್ಮಿಕರಿಗೆ ತರಬೇತಿ ಕಾರ್ಯಾಗಾರ ಜರುಗಿತು. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಥಾಯಿ ಸಮಿತಿ ಚೇರಮನ್ ಮುತ್ತಪ್ಪ ನೂಲ್ಕಿ, ಆರೋಗ್ಯ ನಿರೀಕ್ಷಕ ಮಲ್ಲೇಶಪ್ಪ ಬರದೂರ, ಶಿವಕುಮಾರ ಇಳಕಲ್, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಸದಸ್ಯರಾದ ದಾವೂದಲಿ ಕುದರಿ, ಈರಪ್ಪ ಜೋಗಿ, ಫಕೀರಪ್ಪ ಬಮಲಾಪೂರ, ಮಲ್ಲಿಕ್ಸಾಬ ರೋಣದ, ಮಲ್ಲಿಕಾರ್ಜುನ ಭೂಮನಗೌಡ್ರ, ಅಕ್ಕಮ್ಮ ಮಣ್ಣೊಡ್ಡರ, ಶ್ರೀಶೈಲಪ್ಪ ಬಂಡಿಹಾಳ, ಕಳಕನಗೌಡ ಪೊಲೀಸ್ಪಾಟೀಲ, ಯಲ್ಲಪ್ಪ ಮಣ್ಣೊಡ್ಡರ, ಎಂ.ಎಚ್. ಸೀತಿಮನಿ, ರಮೇಶ ಹಲಗಿಯವರ ಸೇರಿದಂತೆ ಪ.ಪಂ ಸಿಬ್ಬಂದಿ, ಪೌರಕಾರ್ಮಿಕರಿದ್ದರು. ಆರೀಫ್ ಮಿರ್ಜಾ ನಿರ್ವಹಿಸಿದರು.
ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಮಿಶ್ರ ತ್ಯಾಜ್ಯ ಕಸದ ಸಮಸ್ಯೆ ಉಲ್ಬಣಕ್ಕೆ ಅತಿ ಮುಖ್ಯ ಕಾರಣ. ಮಿಶ್ರ ಕಸದಲ್ಲಿ ಶೇ. 90ರಷ್ಟು ಸಂಗ್ರಹಗೊಂಡು ವಿಲೇವಾರಿ ಘಟಕಕ್ಕೆ ಹೋದರೆ, ಕೇವಲ ಶೇ. 10ರಷ್ಟು ಭಾಗ ಮರುಬಳಕೆ ಮತ್ತಿತರ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಹಸಿ ಮತ್ತು ಒಣ ಕಸ ಬೇರೆಬೇರೆ ಹಾಕಿದರೆ ಮರುಬಳಕೆಗೆ ಅನುಕೂಲವಾಗುತ್ತದೆ ಎಂದರು.