ವಿಜಯಸಾಕ್ಷಿ ಸುದ್ದಿ, ಬೆಳಗಾವಿ/ಗದಗ : ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಕಪ್ಪತ್ತಗುಡ್ಡದ ಸುತ್ತಲಿನ ಸೂಕ್ಷ್ಮ ವಲಯವನ್ನು 10 ಕಿ.ಮೀದಿಂದ ಒಂದು ಕಿ.ಮೀಗೆ ಇಳಿಸಿದ್ದು ಆತಂಕಕಾರಿ ವಿಷಯವಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಪುನರ್ ಪರಿಶೀಲನೆ ಮಾಡಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಆಗ್ರಹಿಸಿದರು.
ಅವರು ಕರ್ನಾಟಕ ಪತ್ರಕರ್ತರ ಸಂಘ ಮತ್ತು ತೋಂಟದಾರ್ಯ ಮಠದ ಸಂಯುಕ್ತ ಆಶ್ರಯದಲ್ಲಿ ಕಪ್ಪತ್ತಗುಡ್ಡದಲ್ಲಿ ಏರ್ಪಡಿಸಲಾಗಿದ್ದ 16 ಜಿಲ್ಲೆಗಳ 76 ಪತ್ರಕರ್ತರ `ಕಪ್ಪತ್ತಗುಡ್ಡ ಅಧ್ಯಯನ ಪ್ರವಾಸ’ದ ನಂತರ ನಿಯೋಗವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಳೆದ ಬಾರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಪ್ಪತ್ತಗುಡ್ಡದ ಸಂರಕ್ಷಣೆಗಾಗಿ ಹಲವಾರು ಉತ್ತಮವಾದ ಕ್ರಮಗಳನ್ನು ಕೈಗೊಂಡಿದ್ದರು. ಕಪ್ಪತ್ತಗುಡ್ಡವನ್ನು ಸಂರಕ್ಷಿತ ವಲಯವನ್ನಾಗಿ ಘೋಷಿಸುವಂತೆ ನಾವು ಮಾಡಿಕೊಂಡಿದ್ದ ಮನವಿಗೆ ಅರಣ್ಯ ಸಚಿವರಾಗಿದ್ದ ಸತೀಶ ಜಾರಕಿಹೊಳಿಯವರು ತಕ್ಷಣ ಸ್ಪಂದಿಸಿ ಒಂದು ಹೆಜ್ಜೆ ಮುಂದೆ ಹೋಗಿ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವನ್ನಾಗಿ ಘೋಷಿಸಿದ್ದರು. ಈ ಇಬ್ಬರ ವಿಶೇಷ ಕಾಳಜಿಯಿಂದಾಗಿ ಕಪ್ಪತ್ತಗುಡ್ಡಕ್ಕೆ ಅನುಕೂಲವಾಗಿತ್ತು. ಈಗ 10 ಕಿ.ಮೀ.ವರೆಗೆ ಇದ್ದ ಸೂಕ್ಷ್ಮ ವಲಯವನ್ನು ಒಂದು ಕಿಲೋಮೀಟರ್ಗೆ ಇಳಿಸಿದ್ದು ಮಾತ್ರ ಆತಂಕದ ಬೆಳವಣಿಗೆ ಎಂದು ಶ್ರೀಗಳು ಅಭಿಪ್ರಾಯಪಟ್ಟರು.
ಸಿದ್ದು ಸತ್ಯಣ್ಣವರ್ ಮಾತನಾಡಿ, 150 ವರ್ಷಗಳಿಂದ ಗುಡ್ಡವು ಸಾಕಷ್ಟು ಪಲ್ಲಟಗಳನ್ನು ಕಂಡಿದೆ. ಪರಿಸರದ ಉಳಿವಿಗಾಗಿ ಅರಣ್ಯ ಇಲಾಖೆ ವಿಶೇಷ ಕಾಳಜಿ ವಹಿಸಿದೆ. ಹೆಚ್ಚಿನ ಪ್ರಮಾಣದ ಕಾವಲುಗಾರರನ್ನು ನೇಮಿಸಿದೆ.
ಆಯುರ್ವೇದ ಸಸ್ಯಗಳ ಸಂರಕ್ಷಣೆಗೆ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದ್ದು ಸ್ವಾಗತಾರ್ಹವಾಗಿದೆ ಎಂದರು.
ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪ್ರತಿನಿಧಿಗಳನ್ನು ಸ್ವಾಗತಿಸಿದರು. ಜಿಲ್ಲಾ ಖಜಾನೆ ಇಲಾಖೆ ಉಪನಿರ್ದೇಶಕ ಹರಿನಾಥ ಬಾಬು ಮಾತನಾಡಿ, ಈ ಗುಡ್ಡದಲ್ಲಿ ಎಲ್ಲವೂ ಇದೆ.ಅದನ್ನು ಕಂಡುಕೊಳ್ಳುವ ದೃಷ್ಟಿ ಬೇಕಿದೆ. ಇಲ್ಲಿನ ಗಿಡಮರಗಳು ಆಡುವ ಪಿಸುಮಾತುಗಳನ್ನು ಕೇಳಿಸಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
ಅರಣ್ಯಾಧಿಕಾರಿ ಸಂಗಮೇಶ್ ಬಿ.ಎಸ್ ಮಾತನಾಡಿ, 80 ಸಾವಿರ ಎಕರೆ ವಿಸ್ತಾರ, 62 ಕಿ.ಮೀ ಉದ್ದ ಹಾಗೂ ನಾಲ್ಕು ಕಿ.ಮೀ ಅಗಲವಾದ ಈ ಪ್ರದೇಶದಲ್ಲಿ ನೂರಾರು ಪ್ರಭೇದಗಳ ಆಯುರ್ವೇದ ಸಸ್ಯ ಸಂಪತ್ತಿನೊಂದಿಗೆ ವಿಶಿಷ್ಟ ವನ್ಯಜೀವಿ ಸಂಪತ್ತು ಕೂಡ ಇದೆ. ಇವೆಲ್ಲವುಗಳ ರಕ್ಷಣೆಗಾಗಿ ಮತ್ತು ಕಾಡಿನ ಬೆಂಕಿಯ ರಕ್ಷಣೆಗಾಗಿ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.
ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಕರ್ ಕುದುರೆಮೋತಿ, ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಸುದೇಶ್ ಕುಮಾರ್, ಸಂಪತ್ ಕುಮಾರ್ ಮುಚ್ಚಳಂಬಿ, ಶಿವಾನಂದ ಚಿಕ್ಕಮಠ, ಮಲ್ಲಿಕಾರ್ಜುನ ಎಚ್, ಸಂಘದ ಜಿಲ್ಲಾಧ್ಯಕ್ಷರುಗಳಾದ ರಮೇಶ್ ಭಜಂತ್ರಿ, ಶರಣಪ್ಪ ಗುಮಗೇರಾ, ಡಿ.ಬಿ. ವಿಜಯಶಂಕರ್, ಡಾ ಮಂಜುನಾಥ, ಜಿ.ಎಂ ರಾಜಶೇಖರ, ಅರುಣ ಭೂಪಾಲ್, ಸೋಮಶೇಖರ್ ಹಿರೇಮಠ, ರಾಜು ದಖನಿ, ಮಾಲತೇಶ್ ಅಂಗೂರ್, ವಾಗೀಶ್ ಪಾಟೀಲ್, ರಮೇಶ್ ವತನ್, ಯೋಗೇಶ್ ಕುಮಾರ್, ನಟರಾಜ್ ಹಂಜಗಿಮಠ, ಕಾಶೀನಾಥ್ ಮಣೂರೆ, ಮಾರುತಿ ಬನವಗೋಳ, ಮಲ್ಲಿಕಾರ್ಜುನ್ ಹೆಗ್ ನಾಯಕ್, ಕಿರಣ ಚೌಗುಲಾ, ನಾಗೇಶ್ ವನ್ನೂರ್, ಹಿರೋಜಿ ಮಾವರಕರ್, ಪಾರಿಶ್ ಭೋಸ್ಲೆ, ಈರಣ್ಣ ಬುಡ್ಡಾಗೋಳ, ಸುಧೀರ್ ಕಳ್ಳೇ, ಕೊಟ್ರೇಶ್, ಸೌಮ್ಯ ಯಂಕಂಚಿ, ಬಸವರಾಜ ಗಾಣಿಗೇರ್, ಚೆನ್ನಪ್ಪ ಮಾದರ್, ದಾವಲ್ ಸಾಬ್ ಸೇಡಂ ಮುಂತಾದವರು ಇದ್ದರು.
ಕಪ್ಪತ್ತಗುಡ್ಡ ಯಥಾಸ್ಥಿತಿಯಲ್ಲಿ ಉಳಿದು ಸಮೃದ್ಧವಾದರೆ ಮಾತ್ರ ಮಧ್ಯ ಕರ್ನಾಟಕದಲ್ಲಿ ಮಳೆ-ಬೆಳೆ ಬಂದು ಈ ನಾಡು ಸಮೃದ್ಧವಾಗಿರುತ್ತದೆ. ಮಧ್ಯ ಕರ್ನಾಟಕದ ರೈತರು ಮತ್ತು ಕಪ್ಪತ್ತಗುಡ್ಡದಲ್ಲಿಯೇ ಆಶ್ರೀತವಾಗಿರುವ ಜನಾಂಗ, ತಾಂಡಾಗಳು, ಹಳ್ಳಿಗಳು ಅಲ್ಲಿನ ಪರಿಸರ ಹೈನೋದ್ಯಮ ಎಲ್ಲವೂ ಉಳಿಯುತ್ತದೆ. ಇಲ್ಲವಾದಲ್ಲಿ ಎಲ್ಲವೂ ನಾಶವಾಗಿ ಹೋಗಲಿದೆ. ಇದಕ್ಕೆ ಅವಕಾಶ ನೀಡಬಾರದು.
– ಡಾ.ತೋಂಟದ ಸಿದ್ದರಾಮ ಶ್ರೀಗಳು.
ಹಿರಿಯ ಸಾಹಿತಿ ಸಿದ್ದು ಯಾಪಲಪರವಿ ಮಾತನಾಡಿ, ಕೊರೋನಾ ರೋಗದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಿಂದ ಏನೆಲ್ಲಾ ಅವಾಂತರ ನಡೆಯಿತು ಎನ್ನುವುದನ್ನು ಎಲ್ಲರೂ ನೆನಪು ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ತೊಂದರೆ ಅನುಭವಿಸಬೇಕಾಗುತ್ತದೆ. ಕಪ್ಪತ್ತಗುಡ್ಡ ಮತ್ತು ಇಲ್ಲಿನ ಅತ್ಯಮೂಲ್ಯ ಪರಿಶುದ್ಧ ಪರಿಸರ ಯಥಾವತ್ತಾಗಿ ಉಳಿಯದೆ ಹೋದಲ್ಲಿ ಅದಕ್ಕೆ ಮಾಧ್ಯಮದವರು ಮತ್ತು ಬುದ್ಧಿಜೀವಿಗಳೇ ಕಾರಣವಾಗುತ್ತಾರೆ. ಅದಕ್ಕಾಗಿ ನಾವೆಲ್ಲ ಸೇರಿ ಈ ಕುರಿತು ಜನಜಾಗೃತಿ ಮೂಡಿಸುವ ಕಾರ್ಯ ಮಾಡೋಣ ಎಂದು ಕರೆ ನೀಡಿದರು.