ನೂತನ ನ್ಯಾಯಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನ್ಯಾ.ಮೂ ವಿ.ಶ್ರೀಶಾನಂದ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಶ್ರೇಷ್ಠ ಹಾಗೂ ನೈಜ ನ್ಯಾಯವು ನೊಂದವರ ಕಣ್ಣೀರು ಒರೆಸುವ ಕಾರ್ಯ ಮಾಡುವಂತಾಗಲಿ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಗದಗ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ವಿ.ಶ್ರೀಶಾನಂದ ಅಭಿಪ್ರಾಯಪಟ್ಟರು.

Advertisement

ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ರೋಣ ಇವರ ಸಂಯುಕ್ತಾಶ್ರಯದಲ್ಲಿ ಗಜೇಂದ್ರಗಡದ ಶ್ರೀ ಜಗದ್ಗುರು ತೋಂಟದಾರ್ಯ ಶಾಲೆಯ ಹಿಂಭಾಗದಲ್ಲಿ  ನೂತನವಾಗಿ ನಿರ್ಮಿಸುತ್ತಿರುವ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲಿರುವ ಆತ್ಮಸಾಕ್ಷಿಯು ನ್ಯಾಯಾಧೀಶರಾಗಿ ನಿರಂತರವಾಗಿ ಕಾರ್ಯನಿರ್ವಹಿಸಬೇಕು. ಆತ್ಮಸಾಕ್ಷಿಗೆ ಸರಿ ಎನಿಸಿದ್ದನ್ನು ಮಾತ್ರವೇ ಮಾಡಬೇಕು. ಆಸೆಯು ದುರಾಸೆಯಾದಾಗ ಮನುಷ್ಯರು ಕೆಟ್ಟ ದಾರಿ ಹಿಡಿಯುವಂತೆ ಆಗುತ್ತದೆ ಎಂದರು.

ಸ್ವಾತಂತ್ರö್ಯ ಬಂದ ನಂತರ ದೇಶಕ್ಕೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲ್ಪಟ್ಟ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ. ನಮ್ಮೆಲ್ಲರಿಗೂ ಸಂವಿಧಾನವೇ ಶ್ರೇಷ್ಠ ಗ್ರಂಥ. ಸಂವಿಧಾನಕ್ಕೆ ತನ್ನದೇ ಆದ ಘನತೆ, ಗೌರವ ಇದ್ದು ಸರ್ವರೂ ಸಂವಿಧಾನ ಹಾಗೂ ದೇಶದ ಕಾನೂನುಗಳನ್ನು ಗೌರವಿಸಬೇಕು ಎಂದರು.

ನಾವು ಜೀವಿಸುವ ಪ್ರದೇಶದಲ್ಲಿ ಆಸ್ಪತ್ರೆ ಹಾಗೂ ನ್ಯಾಯಾಲಯ ಕಟ್ಟಡಗಳು ಇರಬೇಕು. ಅವುಗಳು ಅನಿವಾರ್ಯ ಸಂದರ್ಭದಲ್ಲಿ ಮಾತ್ರವೇ ಬಳಕೆಯಾಗಬೇಕು. ಅಂದರೆ ಆರೋಗ್ಯ ಹದಗೆಟ್ಟಾಗ ಮಾತ್ರ ಆಸ್ಪತ್ರೆಗಳಿಗೆ ತೆರಳುತ್ತೇವೆ, ಅದರಂತೆ ಅನ್ಯಾಯವಾದಾಗ ಮಾತ್ರವೇ ನ್ಯಾಯದ ಮೊರೆ ಹೋಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಾಜ್ಯಮುಕ್ತ ಗ್ರಾಮ ಪ್ರತಿಯೊಬ್ಬರ ಆಶಯವಾಗಬೇಕು. ಗದಗ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಯಾವುದೇ ತರಹದ ಪೊಲೀಸ್ ಪ್ರಕರಣ ದಾಖಲಾತಿಗಳಾಗದ ೫೮ ಗ್ರಾಮಗಳಿದ್ದು, ವ್ಯಾಜ್ಯಮುಕ್ತ ಗ್ರಾಮದ ಪರಿಕಲ್ಪನೆಗೆ ಮಾದರಿಯಾಗಿವೆ. ೧೦೦ ಗ್ರಾಮಗಳನ್ನಾದರೂ ವ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿ ಘೋಷಿಸುವ ಯೋಜನೆ ಸಾಕಾರವಾಗಲು ಸಾರ್ವಜನಿಕರು ಸಹಕಾರ ನೀಡಬೇಕೆಂದರು.

ಬಡವರ ಪ್ರಕರಣಗಳಿಗೆ ಆರು ತಿಂಗಳೊಳಗಾಗಿ ನ್ಯಾಯಾಲಯಗಳಲ್ಲಿ ಬಗೆಹರಿದರೆ ಅದೊಂದು ದೊಡ್ಡ ಸಾಧನೆಯಾಗಲಿದೆ. ಸರ್ಕಾರ ಜನಪರ ಕಾರ್ಯಕ್ಕೆ ಹಾಗೂ ಜನಪರ ಕಾನೂನು ಜಾರಿಗೊಳಿಸಲು ಸದಾ ಸಿದ್ಧ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.

ವೇದಿಕೆಯಲ್ಲಿ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಜಿ.ಎಸ್. ಪಾಟೀಲ, ರಾಜ್ಯ ವಕೀಲರ ಪರಿಷತ್ ಸದಸ್ಯ ಎಸ್.ಎಸ್. ಮಿಟ್ಟಲಕೋಡ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲಾ ್ಲ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ರೋಣ ವಕೀಲರ ಸಂಘದ ಅಧ್ಯಕ್ಷ ವಿ.ಎಸ್. ಬಂಗಾರಿ, ರೋಣ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಐ.ಎ. ಫಾರೂಕಿ, ಗದಗ ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿ.ಎನ್. ಪಾಟೀಲ ಉಪಸ್ಥಿತರಿದ್ದರು.

ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಸವರಾಜ ಅವರು ಅತಿಥಿಗಳನ್ನು ಸ್ವಾಗತಿಸಿದರು. ಎಂ.ವೈ. ಗೋಣೇಕರ್ ಪ್ರಾರ್ಥಿಸಿದರು. ರಾಘವೇಂದ್ರ ಅಂಬೋಡೇಕರ್ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತಪಡಿಸಿದರು. ವಕೀಲರಾದ ಬಿ.ಎ. ಸಜ್ಜನರ ಪ್ರಾಸ್ತಾವಿಕ ಮಾತನಾಡಿದರು.

ಸಮಾರಂಭದಲ್ಲಿ  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ  ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು, ಸಾರ್ವಜನಿಕರು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here