ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ಜ್ಯೋತಿ ರಥಯಾತ್ರೆಯು ಜಿಲ್ಲೆಯ ಗಜೇಂದ್ರಗಡದಿಂದ ಬೆಟಗೇರಿಯ ಮೂಲಕ ಗದಗ ನಗರಕ್ಕೆ ಸೋಮವಾರ ಆಗಮಿಸಿತು. ಭವ್ಯ ಸ್ವಾಗತದೊಂದಿಗೆ ನಗರದ ಭೂಮರಡ್ಡಿ ವೃತ್ತದಲ್ಲಿ ರಥಯಾತ್ರೆಗೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ, ಪ್ರೊ. ಕೆ.ಎಚ್. ಬೇಲೂರ ಸೇರಿದಂತೆ ಗಣ್ಯರು, ಹಿರಿಯರು, ಶಾಲಾ ಮಕ್ಕಳು ರಥಯಾತ್ರೆಯಲ್ಲಿ ಭಾಗವಹಿಸಿದ್ದರು.
ಭೂಮರೆಡ್ಡಿ ವೃತ್ತದಿಂದ ರಥಯಾತ್ರೆಯು ನಗರದ ಹಳೇ ಡಿಸಿ ಆಫೀಸ್, ಭೀಷ್ಮ ಕೆರೆ, ಚೆನ್ನಮ್ಮ ವೃತ್ತ, ಮುಳಗುಂದ ನಾಕಾ ಮಾರ್ಗವಾಗಿ ನಗರದ ಜಿಲ್ಲಾಡಳಿತ ಭವನಕ್ಕೆ ಬಂದು ತಲುಪಿತು. ಮಂಗಳವಾರ ರಥಯಾತ್ರೆಯನ್ನು ಮುಂಡರಗಿ ತಾಲೂಕಿಗೆ ಬೀಳ್ಕೊಡಲಾಯಿತು.
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡ ನಿಮಿತ್ತ ಕರ್ನಾಟಕ ಸರ್ಕಾರವು ಹಮ್ಮಿಕೊಂಡ `ಕರ್ನಾಟಕ ಸಂಭ್ರಮ-50’ರ ಕಾರ್ಯಕ್ರಮದ ಅಂಗವಾಗಿ ಜ್ಯೋತಿ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸುತ್ತಿದೆ.