ಗಟ್ಟಿ ವ್ಯಕ್ತಿತ್ವದ ಸ್ನೇಹಜೀವಿ ಕೆ.ಎಚ್. ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬಂಗಾರಪ್ಪ ಮಂತ್ರಿ ಮಂಡಲದಲ್ಲಿ ನಾನು ಮತ್ತು ಕೆ.ಎಚ್. ಪಾಟೀಲರು ಜೊತೆಯಾಗಿ ಕೆಲಸ ಮಾಡಿದವರು. ಅದಕ್ಕೂ ಮೊದಲು ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ 1985ರಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಲು ಮೊದಲ ಬಾರಿಗೆ ಟಿಕೆಟ್ ನೀಡಿದವರು ಕೆ.ಎಚ್. ಪಾಟೀಲರು. ಅಂದಿನಿಂದ ಈವರೆಗೆ 9 ಬಾರಿ ವಿಧಾನಸಭೆಗೆ ಸ್ಪರ್ಧಿಸಿ, ಕೆ.ಎಚ್. ಪಾಟೀಲರಂತೆ ಸೋಲು-ಗೆಲುವಗಳನ್ನು ಸಮನಾಗಿ ಕಂಡಿದ್ದೇನೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಮಂತ್ರಿ ಪದವಿಯವರೆಗೆ ಕೆ.ಎಚ್. ಪಾಟೀಲರ ಸಾಧನೆ ಅಪಾರ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸ್ಮರಿಸಿದರು.

Advertisement

ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಭಾನುವಾರ ಕೆ.ಎಚ್. ಪಾಟೀಲ ಪ್ರತಿಷ್ಠಾನ ಆಯೋಜಿಸಿದ್ದ ಕೆ.ಎಚ್. ಪಾಟೀಲ ಜನ್ಮಶತಮಾನೋತ್ಸವ ಹಾಗೂ ಕಾಟನ್ ಸೇಲ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಅಪಾರವಾದ ಆಸಕ್ತಿ ಹೊಂದಿ, ಅಷ್ಟೇ ಆಸಕ್ತಿಯಿಂದ ಕೆಲಸ ಮಾಡುತ್ತಿದ್ದ ದಿ. ಕೆ.ಎಚ್. ಪಾಟೀಲರು ಸಾಮಾಜಿಕ ನ್ಯಾಯಕ್ಕೂ ಬೆಲೆ ಕೊಡುವ ಕೆಲಸ ಮಾಡಿದವರಾಗಿದ್ದಾರೆ. ಎಲ್ಲರನ್ನೂ ಜೊತೆಯಾಗಿಸಿಕೊಂಡು ಹೋಗುತ್ತಿದ್ದ ಕೆ.ಎಚ್. ಪಾಟೀಲರಿಗೆ ಯಾರಾದರೂ ಇಷ್ಟವಾದರೆ, ಎಂಥದೇ ಕಷ್ಟ ಬಂದರೂ ಅವರ ಪರವಾಗಿ ನಿಲ್ಲುತ್ತಿದ್ದ ಸ್ನೇಹ ಜೀವಿ. ಹಾಗೆಯೇ ಯಾರ ಬಗ್ಗೆಯಾದರೂ ದ್ವೇಷ ಇದ್ದರೆ, ಅವರ ಬಗ್ಗೆ ಕಿಂಚಿತ್ತೂ ಮಾತನಾಡದ ವ್ಯಕ್ತಿತ್ವ ಅವರದು. ಅಂಥ ಗಟ್ಟಿ ವ್ಯಕ್ತಿತ್ವವನ್ನು ಕೆ.ಎಚ್. ಪಾಟೀಲರಲ್ಲಿ ಮಾತ್ರ ಕಾಣಲು ಸಾಧ್ಯ ಎಂದರು.

ಕಾನೂನು, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕೆ.ಎಚ್. ಪಾಟೀಲರ ಚುನಾವಣೆ ಪ್ರಚಾರ ಭಾಷಣದಲ್ಲಿ ಜನರ ಬದುಕಿಗೆ ಅಗತ್ಯವಿರುವ ಬದಲಾವಣೆಗಳ ಕುರಿತಾದ ಚಿಂತನೆಗಳಿದ್ದವು. ಶಾಲಾ ಮಕ್ಕಳಿಗೆ ಹಾಲು, ಮೊಟ್ಟೆ ಸಿಗುವಂತಹ ಸರಕಾರ ಬರಬೇಕು, ಜನರಿಗೆ ಶುದ್ಧ ನೀರು ಕೊಡುವ ಕೆಲಸ ಆಗಬೇಕು ಎಂದು ಬಯಸಿದ್ದರು. ಅವರ ಜನ್ಮಶತಮಾನೋತ್ಸವಕ್ಕೆ 60 ಕೆಲಸಗಳನ್ನು ಮಾಡುವ ಮೂಲಕ ಅವರ ಕನಸನ್ನು ನನಸಾಗಿಸಿದ ಸಮಾಧಾನ ನನಗಿದೆ ಎಂದ ಅವರು, ಎಪಿಎಂಸಿ ವ್ಯವಸ್ಥೆ ಸ್ಥಾಪನೆಗೆ ಕೆ.ಎಚ್. ಪಾಟೀಲರು ಕಾರಣ. ಅಂಥ ವ್ಯವಸ್ಥೆ ದುರ್ಬಲಗೊಳಿಸುವ ಪ್ರಯತ್ನ ವಿಫಲಗೊಳಿಸಲಾಗಿದೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಆದರೆ ರೈತರನ್ನು ಶೋಷಣೆ ಮುಕ್ತವಾಗಿಸುವ ಕನಸು ಇನ್ನೂ ನನಸಾಗಿಲ್ಲ ಎಂದರು.

ಇದೇ ಸಂದರ್ಭದಲ್ಲಿ ಕೆ.ಎಚ್. ಪಾಟೀಲರ ಒಡನಾಡಿಗಳಾದ ಸಾಹಿತಿ ಜೆ.ಕೆ. ಜಮಾದಾರ, ಎಸ್.ಎಂ. ತಂಬದ, ಬಿ.ಎ. ಬ್ಯಾಳಿ, ಎಚ್.ಎಸ್. ವಾಮನಾಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಡಿ.ಆರ್. ಪಾಟೀಲ, ಕೆ.ಎಚ್. ಪಾಟೀಲರ ಜನ್ಮಶತಮಾನೋತ್ಸವವನ್ನು 100 ಕಾರ್ಯಕ್ರಮಗಳ ಮೂಲಕ ಅವರ ಕನಸಿನ ಯೋಜನೆಗಳನ್ನು ಜಾರಿ ಮಾಡುವ ಪ್ರಯತ್ನ ಮಾಡಿದ್ದೇವೆ ಎಂದರು.

ಸಮಾರಂಭದಲ್ಲಿ ಸರಕಾರ ಮುಖ್ಯ ಸಚೇತಕ ಸಲೀಂ ಅಹ್ಮದ್, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಜಿ.ಎಸ್. ಪಾಟೀಲ, ಶ್ರೀನಿವಾಸ ಮಾನೆ, ಸಿ.ಸಿ. ಪಾಟೀಲ, ಪ್ರಸಾದ ಅಬ್ಬಯ್ಯ, ಎ.ಎಂ. ಹಿಂಡಸಗೇರಿ, ಜಿ.ಟಿ. ಪಾಟೀಲ, ಎಸ್.ವಿ. ಸಂಕನೂರ, ಬಿ.ಆರ್.ಯಾವಗಲ್, ಎಸ್.ಜಿ. ನಂಜಯ್ಯನಮಠ, ಎನ್.ಎಚ್. ಕೋನರೆಡ್ಡಿ, ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಗಡ್ಡದೇವರಮಠ, ಐ.ಜಿ. ಸನದಿ, ಜಿ.ಆರ್. ವೆಂಕಟೇಶ, ಯು.ಬಿ. ವೆಂಕಟೇಶ, ಬೋಸರಾಜು, ಅಜ್ಜಂಪೀರ ಖಾದ್ರಿ, ಯು.ಬಿ. ಬಣಕಾರ, ರಾಮಣ್ಣ ಲಮಾಣಿ, ಯಾಸಿರ್ ಖಾನ್ ಪಠಾಣ ಉಪಸ್ಥಿತರಿದ್ದರು.

 

ಕೆಲಸ ತೆಗೆದುಕೊಳ್ಳುವ ದಾರಿ ಎಚ್.ಕೆ. ಪಾಟೀಲರಿಗೆ ಕರಗತವಾಗಿದೆ. ಕೆಲಸ ಮಾಡಿಸಿಕೊಳ್ಳುವುದು, ಮಾಡುವುದೂ ಒಂದು ಕಲೆ. ಆ ಕಲೆ ಕರಗತವಾಗಿದ್ದರಿಂದಲೇ ಎಚ್.ಕೆ. ಪಾಟೀಲ, ಡಿ.ಆರ್. ಪಾಟೀಲರು ತಮ್ಮ ತಂದೆಯ ಕನಸನ್ನು ನನಸು ಮಾಡಲು ಸಾಧ್ಯವಾಯಿತು. ಕೆ.ಎಚ್. ಪಾಟೀಲರ ಪುತ್ರ ಎನ್ನುವ ಕಾರಣಕ್ಕೆ ಎಚ್.ಕೆ. ಪಾಟೀಲರು ರಾಜಕೀಯಕ್ಕೆ ಬಂದಿಲ್ಲ. ಅವರು ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಹೊಂದಿರುವ ವಿಶೇಷ ವ್ಯಕ್ತಿ ಎಂದು ಮಲ್ಲಿಕಾರ್ಜುನ ಖರ್ಗೆ

ಕೆ.ಎಚ್. ಪಾಟೀಲರು ಸ್ವಚ್ಛ ಸ್ನೇಹಕ್ಕೆ ಅನ್ವರ್ಥರಾಗಿದ್ದಾರೆ. ರಾಜ್ಯದಲ್ಲಿ ಅರಣ್ಯ ಉಳಿದಿರುವುದಕ್ಕೆ, ಎಪಿಎಂಸಿ ಇನ್ನೂ ಜೀವಂತವಾಗಿರುವುದಕ್ಕೆ ಕೆ.ಎಚ್. ಪಾಟೀಲ ಕೊಡುಗೆ ಅಪಾರ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕು ಎಂದು ಕೆ.ಎಚ್. ಪಾಟೀಲರು ದಶಕಗಳ ಹಿಂದೆಯೇ ಕನಸು ಕಂಡಿದ್ದರು.

– ಈಶ್ವರ ಖಂಡ್ರೆ.

ಅರಣ್ಯ ಸಚಿವರು.

 

**ಕೋಟ್**

ಸಿದ್ದನಗೌಡ ಪಾಟೀಲರು ಕಣಗಿನಹಾಳ ಗ್ರಾಮದಲ್ಲಿ ಒಂದು ಸಹಕಾರಿ ಸಂಘ ಸ್ಥಾಪನೆ ಮಾಡಿದರು. ಕೆ.ಎಚ್. ಪಾಟೀಲರು ಅಖಂಡ ಧಾರವಾಡ ಜಿಲ್ಲೆಯಲ್ಲಿ ನೂರಾರು ಸಂಘ ಸ್ಥಾಪನೆ ಮಾಡಿ, ದೇಶಾದ್ಯಂತ ಸಹಕಾರಿ ಕ್ಷೇತ್ರ ಬೆಳೆಯಲು ಕಾರಣರಾದರು. ಆ ಕಾರಣಕ್ಕಾಗಿ ಅವರನ್ನು ಸಹಕಾರಿ ರಂಗದ ಭೀಷ್ಮ ಎಂದೇ ಕರೆಯಲಾಗುತ್ತದೆ.

– ಜಿ.ಟಿ. ದೇವೇಗೌಡ.

ಶಾಸಕರು.

 

**ಕೋಟ್**

ಕೆ.ಎಚ್. ಪಾಟೀಲರ ವಿಚಾರ, ಆಲೋಚನೆ, ದೂರದೃಷ್ಟಿಯನ್ನು ಹೊಂದಿರುವ ಎಚ್.ಕೆ. ಪಾಟೀಲರು ಗದಗ ಜಿಲ್ಲೆಗೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದಾರೆ. ಗದಗ ಪರಿಸರದ ಸಾರ್ವಜನಿಕ ಆಸ್ತಿಯನ್ನು ಜನರಿಗೆ ಉಪಯೋಗವಾಗುವಂತೆ ರೂಪಿಸಿದ ಗದಗ ವ್ಯಾಪಾರ, ವಾಣಿಜ್ಯ, ಸಂಸ್ಕೃತಿ ಪ್ರಾಧಿಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿ.ವಿ, ಸಬರಮತಿ ಆಶ್ರಮದ ಪ್ರತಿರೂಪ, ಜಿಲ್ಲಾ ಆಸ್ಪತ್ರೆ, ಶುದ್ಧ ಕುಡಿಯುವ ನೀರಿನ ಘಟಕ, ಮುಕ್ತಿ ವನ ಹೀಗೆ ಅನೇಕ ಕೆಲಸಗಳ ಮೂಲಕ ಜನಸೇವೆ ಮಾಡುತ್ತಿದ್ದಾರೆ.

– ಡಿ.ಕೆ. ಶಿವಕುಮಾರ್.

ಉಪ ಮುಖ್ಯಮಂತ್ರಿಗಳು.


Spread the love

LEAVE A REPLY

Please enter your comment!
Please enter your name here