ಜಿಲ್ಲಾ ಆಸ್ಪತ್ರೆಗೆ ದಿ. ಕೆ.ಎಚ್. ಪಾಟೀಲರ ಹೆಸರು ನಾಮಕರಣ: ಸಿಎಂ ಸಿದ್ದರಾಮಯ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರಿ ರಂಗಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ದಿ. ಕೆ.ಎಚ್. ಪಾಟೀಲರು ನಿಷ್ಠುರವಾದಿ ಹಾಗೂ ಪ್ರಾಮಾಣಿಕ ರಾಜಕಾರಣಿ ಎಂದೇ ಜನಜನಿತರರಾಗಿದ್ದರು. ಗದುಗಿನ ಹುಲಕೋಟಿಯ ಗ್ರಾಮೀಣ ಸೊಗಡಿನೊಂದಿಗೆ ಬೆಳೆದ ಪಾಟೀಲರು ಶಾಸಕರಾಗಿ, ಸಚಿವರಾಗಿ, ಸಹಕಾರಿ ಧುರೀಣರಾಗಿ ಬೆಳದ ಪರಿ ಅನನ್ಯ. ಕೆ.ಎಚ್. ಪಾಟೀಲರು ವ್ಯಾವಹಾರಿಕ ಅರ್ಥದ ರಾಜಕಾರಣಿಯಾಗಿರಲಿಲ್ಲ. ಅವರೊಬ್ಬ ದಾರ್ಶನಿಕ ಧುರೀಣರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Advertisement

ಮಾಜಿ ಸಚಿವ ಕೆ.ಎಚ್. ಪಾಟೀಲರ ಜನ್ಮಶತಮಾನೋತ್ಸವ ಮತ್ತು ಗದಗ ಕೋ-ಆಪರೇಟೀವ್ ಕಾಟನ್ ಸೇಲ್ಸ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ವೈದ್ಯಕೀಯ ಕಾರಣಗಳಿಂದಾಗಿ ಅನುಪಸ್ಥಿತರಿದ್ದ ಅವರು ತಮ್ಮ ಸಂದೇಶ ಪತ್ರವನ್ನು ರವಾನಿಸಿ, ಕೆ.ಎಚ್. ಪಾಟೀಲರು ಭವಿಷ್ಯವನ್ನು ಉತ್ತಮಗೊಳಿಸುವ, ರೈತರ ಹಿತ ಕಾಪಾಡುವ, ಶೋಷಣೆ ಮುಕ್ತ ಸಮಾಜ ನಿರ್ಮಾಣ ಮಾಡುವ ಆಶಯವನ್ನು ಸದಾ ಹೊಂದಿದ್ದರು. ತಮ್ಮ ಆದರ್ಶಗಳಿಂದಾಗಿ ಅವರು ಇತರರಿಗೂ ಅನುಕರಣೀಯರಾಗಿದ್ದರು.

ಸಚಿವರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪಾಟೀಲರು, ಸಂಘಟನಾ ಚತುರರು ಹಾಗೂ ಆಡಳಿತದಲ್ಲಿ ನಿಪುಣರಾಗಿದ್ದರು. ಜನಹಿತವನ್ನೇ ಕಾಯಕವಾಗಿಸಿಕೊಂಡಿದ್ದ ಕೆ.ಎಚ್. ಪಾಟೀಲರ ನೇತೃತ್ವದಲ್ಲಿ ರಾಜ್ಯದ ಸಹಕಾರಿ ಕ್ಷೇತ್ರ ಸದೃಢ ಬೆಳವಣಿಗೆಯನ್ನು ಕಂಡಿತು. ದೇಶದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದ್ದು, ಈ ಕ್ಷೇತ್ರಕ್ಕೆ ಗದುಗಿನ ಗ್ರಾಮವೊಂದರಲ್ಲೇ ಮುನ್ನುಡಿ ಬರೆಯಲಾಗಿದ್ದು ವಿಶೇಷ.

ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ, ಕೃಷಿಯಲ್ಲಿ ನೂತನ ತಂತ್ರಜ್ಞಾನ ಬಳಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಾವಯವ ಕೃಷಿ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ, ಕೃಷಿಕರಿಗೆ ತರಬೇತಿಯಂತಹ ಕಾರ್ಯಕ್ರಮಗಳು, ಪಾಟೀಲರ ರೈತಪರ ಕಾಳಜಿಗೆ ಕನ್ನಡಿ ಹಿಡಿದಿವೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಕಲ್ಪದೊಂದಿಗೆ ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿರುವ ಹೆಗ್ಗಳಿಕೆ ಪಾಟೀಲರದ್ದಾಗಿದೆ.

ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಕಲ್ಪದೊಂದಿಗೆ ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿರುವ ಹೆಗ್ಗಳಿಕೆ ಪಾಟೀಲರದ್ದು.

1970ರ ದಶಕದಲ್ಲಿ ದೇವರಾಜ ಅರಸು ಅವರ ನೇತೃತ್ವದ ಸಂಪುಟದಲ್ಲಿ ಕೆ.ಹೆಚ್. ಪಾಟೀಲರು ಅರಣ್ಯ ಸಚಿವರಾಗಿದ್ದರು. ಮೈಸೂರಿನ ಹೆಚ್.ಡಿ. ಕೋಟೆಯಲ್ಲಿ ಜನರಿಂದ ಅವ್ಯಾಹತವಾಗಿ ಅರಣ್ಯ ನಾಶವನ್ನು ಕಂಡ ಪಾಟೀಲರು ಮರ ಕಡಿಯುವುದನ್ನು ನಿಷೇಧಿಸಲು ಆ ಸಂದರ್ಭದಲ್ಲಿ ಬಿಗಿ ಕಾನೂನುಗಳನ್ನು ತಂದರು.

ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಅಪಾರ ಕಾಳಜಿ ವಹಿಸಿದ್ದ ಕೆ.ಹೆಚ್.ಪಾಟೀಲರ ದಿಟ್ಟತನದಿಂದ ರಾಜ್ಯದ ಕಾಡುಗಳು ಇನ್ನೂ ಹಚ್ಚಹಸಿರಾಗಿಯೇ ಉಳಿದಿದೆ.

ನಮ್ಮ ರಾಜ್ಯವನ್ನು ‘ಕರ್ನಾಟಕ ರಾಜ್ಯ’ ಎಂದು ಅಧಿಕೃತವಾಗಿ ಘೋಷಿಸುವ ನಾಮಕರಣೋತ್ಸವ ಸಮಿತಿಗೆ ಕೆ.ಎಚ್. ಪಾಟೀಲರವರು ಅಧ್ಯಕ್ಷರಾಗಿದ್ದರು.

ಗಾಂಧಿಜೀಯವರ ಆಶಯ ಹಾಗೂ ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ಅವರ ದೂರದೃಷ್ಟಿಯ ಪರಿಣಾಮವಾಗಿ ರಾಷ್ಟ್ರಮಟ್ಟದಲ್ಲಿ ಸಹಕಾರ ಸಂಘಗಳು ಇಂದು ಬೆಳೆದು ನಿಂತಿವೆ.

ಸಹಕಾರಿ ಕ್ಷೇತ್ರದ ಮೂಲಕ ಯುವಪೀಳಿಗೆ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ ಹತ್ತು ಹಲವು ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ.

ಈ ಯೋಜನೆಯ ಲಾಭ ಪಡೆದು ಜನರು ಆರ್ಥಿಕವಾಗಿ ಸಬಲರಾಗುವ ಜೊತೆಗೆ ರಾಜ್ಯದ ಅಭಿವೃದ್ಧಿಗೂ ಕೈಜೋಡಿಸಲೆಂದು ಹಾರೈಸುತ್ತೇನೆ.

ಶೋಷಣೆ ಮುಕ್ತ ಸಮಾಜ, ಸಾಮಾಜಿಕ ನ್ಯಾಯ ಹಾಗೂ ಸರ್ವರಿಗೂ ಸಮಬಾಳು ಮತ್ತು ಸಮಪಾಲು ಎಂಬ ಆದರ್ಶದವನ್ನು ಸಾಕಾರಗೊಳಿಸಲು ತಮ್ಮ ಜೀವಿತಾವಧಿಯನ್ನೇ ಮುಡುಪಾಗಿಟ್ಟ ಕೆ.ಹೆಚ್. ಪಾಟೀಲರಂತಹ ಮಹಾನ್ ನಾಯಕರು ನಮಗೆಲ್ಲರಿಗೂ ಪ್ರೇರಣಾ ಶಕ್ತಿಯಾಗಿದ್ದಾರೆ.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಕನಸು ಹೊತ್ತು ಶ್ರಮಿಸುತ್ತಿರುವ ಸರ್ಕಾರದ ಗುರಿ ಸಾಧನೆಗೆ ಕೆ.ಹೆಚ್. ಪಾಟೀಲರು ಬಿಟ್ಟುಹೋದ ಆದರ್ಶಗಳು ನಮಗಿಂದು ದಾರಿದೀಪವಾಗಿದೆ.

ಈ ನಿಟ್ಟಿನಲ್ಲಿ ಗದುಗಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಶ್ರೀ ಕೆ.ಎಚ್ ಪಾಟೀಲರ ಹೆಸರನ್ನು ನಾಮಕರಣ ಮಾಡಲು ನಮ್ಮ ಸರ್ಕಾರ ಕ್ರಮವಹಿಸಲಿದೆ.

ಸಮಾಜದ ಒಳಿತಿಗಾಗಿ ಶ್ರಮಿಸುವ ಕೆ.ಹೆಚ್.ಪಾಟೀಲರ ಗುಣ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡಿರುವ ಅವರ ಮಗನಾದ ಶ್ರೀಯುತ ಹೆಚ್.ಕೆ. ಪಾಟೀಲರ ದೂರದೃಷ್ಟಿಯ ಯೋಜನೆಗಳು, ರಾಜ್ಯದ ಏಳಿಗೆಗೆ ಪೂರಕವಾಗಿರುವುದು ಶ್ಲಾಘನೀಯ.

ಸತ್ಯಸಂಧತೆ, ಸರಳತೆ, ಆತ್ಮವಿಶ್ವಾಸ, ಧೈರ್ಯ ಪರಿಶ್ರಮಗಳ ಸಾಕಾರಮೂರ್ತಿಯಾಗಿದ್ದ ಕೆ.ಹೆಚ್. ಪಾಟೀಲರ ಬದುಕು ಸಾಧನೆಗಳು ಯುವಪೀಳಿಗೆಗೆ ಎಂದೆಂದಿಗೂ ಆದರ್ಶಪ್ರಾಯವಾಗಿರಲಿ ಎಂದು ಅವರು ಹಾರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here