ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಟಿಪ್ಪು ಸರ್ಕಲ್ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗದಗ ಜಿಲ್ಲಾಧ್ಯಕ್ಷ ಹನಮಂತಪ್ಪ ಎಚ್.ಅಬ್ಬಿಗೇರಿ ನೇತೃತ್ವದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ತಮಿಳು ಭಾಷೆಯಿಂದ ಕನ್ನಡ ಭಾಷೆಯು ಉಗಮವಾಗಿದೆ ಎಂದು ಹೇಳಿಕೆ ನೀಡಿದ ತಮಿಳು ನಟ, ರಾಜಕಾರಣಿ ಕಮಲ್ ಹಾಸನ್ರ ಭಾವಚಿತ್ರವನ್ನು ದಹಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹನಮಂತಪ್ಪ ಅಬ್ಬಿಗೇರಿ, ಈ ಕೂಡಲೇ ಕಮಲ್ ಹಾಸನ್ ಕರ್ನಾಟಕದ ಜನತೆಯ ಕ್ಷಮೆ ಯಾಚಿಸಬೇಕು. ಅವರು ನಟಿಸಿರುವ `ಥಗ್ ಲೈಫ್’ ಚಲನಚಿತ್ರವನ್ನು ಕರ್ನಾಟಕ ರಾಜ್ಯಾದಲ್ಲಿ ಬಿಡುಗಡೆ ಮಾಡಬಾರದೆಂದು ಕರ್ನಾಟಕ ವಾಣಿಜ್ಯ ಚಿತ್ರಮಂಡಳಿಗೆ ಒತ್ತಾಯಿಸಿದರಲ್ಲದೆ, ಗದಗ ಜಿಲ್ಲೆಯಲ್ಲಿ ಈ ಚಿತ್ರ ಬಿಡುಗಡೆಯಾದರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಸವರಾಜ ಹೊಗೆಸೊಪ್ಪಿನ, ನಿಂಗನಗೌಡ ಮಾಲಿಪಾಟೀಲ, ವಿನಾಯಕ ಬದಿ, ನಬೀಸಾಬ ಕಿಲ್ಲೇದಾರ, ಆಶಾ ಜೂಲಗುಡ್ಡ, ತೌಸಿಫ ಢಾಲಾಯತ, ಮುತ್ತಣ್ಣ ಚವಡಣ್ಣವರ, ದಾದಾಪೀರ ನದಾಫ್, ದಾವಲಸಾಬ ತಹಸೀಲ್ದಾರ, ಯಲ್ಲಪ್ಪ ಭೋವಿ, ಲೋಕೇಶ ಸುತಾರ, ಪ್ರವೀಣ ಗಾಣಗೇರ, ಚನ್ನಬಸಯ್ಯ ಗಡ್ಡದೇವರಮಠ, ಸಿರಾಜ್ ಹೊಸಮನಿ, ರಜಾಕ್ ಢಾಲಾಯತ, ಬಸವರಾಜ ರಗಟಿ, ಗೌಸು ಶಿರಹಟ್ಟಿ, ಮಹಾದೇವಿ ದೊಡ್ಡಗೌಡ್ರ, ಪ್ರಕಾಶ ಹುಡೇದ, ರಾಮನಗೌಡ ಹಳೇಮನಿ, ಹುಸೇನಸಾಬ ಕುಂಡಾಲಿ, ಮಾರುತಿ ಈಳಗೇರ, ಕೊಂಚಿಗೇರಮಠ ಸೇರಿದಂತೆ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕನ್ನಡ ಭಾಷೆ 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀಮಂತ ಭಾಷೆಯಾಗಿದೆ. ಕನ್ನಡ ಭಾಷೆಯಲ್ಲಿ ಅನೇಕ ಪ್ರಸಿದ್ಧ ಶರಣರು, ಸಂತರು, ದಾರ್ಶನಿಕರು, ರಾಜ ಮಹಾರಾಜರು, ಕವಿಗಳು, ಲೇಖಕರು ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಕನ್ನಡಕ್ಕೆ ಭಾರತ ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಇಂತಹ ಶ್ರೀಮಂತ ಭಾಷೆಯನ್ನು ಅವಮಾನಿಸಿರುವ ಕಮಲ್ ಹಾಸನ್ ಅವರ ಹೇಳಿಕೆ ಅತ್ಯಂತ ಕೀಳುಮಟ್ಟದ್ದಾಗಿದೆ ಎಂದು ಹನಮಂತಪ್ಪ ಅಬ್ಬಿಗೇರಿ ಹೇಳಿದರು.