ಮಂಗಳೂರು:- ಇನ್ಮುಂದೆ ಅಂದ್ರೆ ಈ ವರ್ಷದಿಂದ ದಸರಾ ಕ್ರೀಡಾಕೂಟದಲ್ಲಿ ಕಂಬಳ ಸೇರ್ಪಡೆ ಮಾಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಲ್ಲಿನ ಮೂಳೂರು ಅಡ್ಡೂರು ಜೋಡುಕೆರೆ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವರ್ಷದಿಂದ ದಸರಾ ಕ್ರೀಡಾಕೂಟದಲ್ಲಿ ಕಂಬಳವನ್ನು ಸೇರಿಸಲಾಗುವುದು. ಕಂಬಳವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರ ನೀಡಲಾಗುವುದು. ಬೆಂಗಳೂರಿನಲ್ಲಿಯೂ ಕಂಬಳ ನಡೆದಿದೆ. ಕಂಬಳ ಕ್ರೀಡೆಗೆ ಶಾಶ್ವತ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಕಂಬಳದ ಕೋಣಗಳನ್ನು ಸಾಕಿ, ಅದರೊಂದಿಗೆ ತೋರಿಸುವ ಪ್ರೀತಿ ಅನನ್ಯವಾದದ್ದು. ಜನಪದ ಸಂಸ್ಕೃತಿ ಉಳಿಸಲು ಸರ್ಕಾರ ಸದಾ ನೆರವು ನೀಡಲಿದೆ ಎಂದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಶ್ರೀಮಂತವಾಗಿದೆ. ಧಾರ್ಮಿಕವಾಗಿ ಹಲವಾರು ಪುಣ್ಯಕ್ಷೇತ್ರಗಳಿವೆ. ಅತಿ ಹೆಚ್ಚು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳು ಇವೆ. ಇದಕ್ಕೆ ಪೂರಕವಾಗಿ ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಶೀಘ್ರವೇ ಪ್ರವಾಸೋದ್ಯಮ ಸಚಿವರೊಂದಿಗೆ ಇಲ್ಲಿಗೆ ಬಂದು ಹೊಸ ಕಾರ್ಯಕ್ರಮ, ನೀತಿ ರೂಪಿಸಲಾಗುವುದು ಎಂದು ಹೇಳಿದರು.