ವಿಜಯಸಾಕ್ಷಿ ಸುದ್ದಿ, ಗದಗ : ಸಹಕಾರಿ ಕ್ಷೇತ್ರದ ಉದಯಕ್ಕೆ ಕಾರಣವಾದ ತಾಲೂಕಿನ ಕಣಗಿನಹಾಳ ಗ್ರಾಮದ ಸರಕಾರಿ ಶಾಲೆ ಕಾಯಕಲ್ಪಕ್ಕೆ ಕಾದು ಕುಳಿತಿದೆ. ಕಣಗಿನಹಾಳದಿಂದ ಹರ್ಲಾಪುರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೇವಲ 2 ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
1ರಿಂದ 5ನೇ ತರಗತಿಯವರೆಗೆ ಒಟ್ಟು 88 ಮಕ್ಕಳು ಶಾಲೆಯಲ್ಲಿದ್ದರೂ ಅಗತ್ಯ ಕೊಠಡಿಗಳಿಲ್ಲದೇ ಇಕ್ಕಟ್ಟಿನಲ್ಲಿ ಪಾಠ ಬೋಧನೆ ನಡೆಯಬೇಕಾಗಿದೆ.
ವರ್ಷದ ಹಿಂದೆ ಈ ಶಾಲೆ ಬೇರೊಂದು ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಮಳೆ ಬಂದರೆ ರಾಡಿ ನೀರು ಶಾಲೆಗೆ ನುಗ್ಗಿ ಆವಾಂತರ ಸೃಷ್ಟಿಸುತ್ತಿತ್ತು. ಹಲವು ಆಗ್ರಹಗಳ ತರುವಾಯ, ಅಧಿಕಾರಿಗಳು ಶಾಲೆಗೆ ಭೇಟಿ ನೀಡಿದರು. ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಿದರು.
ಒಟ್ಟು 5 ಕೊಠಿಗಳ ಪೈಕಿ 1 ಕೊಠಡಿಯಲ್ಲಿ ಕಣಗಿನಹಾಳ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆ ಮಾಡುತ್ತಿದೆ. ಮತ್ತೊಂದು ಕೊಠಡಿ ಶಿಥಿಲಾವಸ್ಥೆಯಲ್ಲಿದೆ. ಇನ್ನೊಂದು ಕೊಠಡಿ ಬಿಸಿಯೂಟಕ್ಕೆ ಬಳಕೆಯಾಗುತ್ತಿದೆ. ಇನ್ನುಳಿದ 2 ಕೊಠಡಿಗಳಲ್ಲಿಯೇ 5 ತರಗತಿಗಳು ನಡೆಯಬೇಕು. ಶಾಲೆಯ ಮುಖ್ಯ ಶಿಕ್ಷಕರೂ ಅಲ್ಲಿಯೇ ಕುಳಿತು ಕೆಲಸ ಮಾಡಬೇಕಾದ ಸ್ಥಿತಿ ಬಂದಿದೆ.
ಕಣಗಿನಹಾಳ ಗ್ರಾಮ ಪಂಚಾಯಿತಿ ಅಧಿಕಾರಿಗಳು 6 ತಿಂಗಳ ಒಳಗಾಗಿ ಶಾಲೆಯ ಕೊಠಡಿಯನ್ನು ತೆರವು ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ 2 ವರ್ಷವಾದರೂ ಗ್ರಾ.ಪಂ ಕಚೇರಿ ಸ್ಥಳಾಂತರಗೊಂಡಿಲ್ಲ. ಹೀಗಾಗಿ ಶಾಲೆಗೆ ಕೊಠಡಿಗಳ ಕೊರತೆ ಎದುರಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಕಣಗಿನಹಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿಗತಿಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸ್ಥಳೀಯ ಶಾಸಕರಿಗೂ ಮಾಹಿತಿ ನೀಡಿ ಸಮಸ್ಯೆ ಪರಿಹರಿಸುವಂತೆ ವಿನಂತಿಸಲಾಗಿದ್ದು, ಶಾಸಕರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಪರಶುರಾಮ ಭಜಂತ್ರಿ.