ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ತಹಸೀಲ್ದಾರರ ಕಚೇರಿಯಲ್ಲಿ ಶನಿವಾರ ದಾಸ ಸಾಹಿತ್ಯದ ಮೇರು ಕವಿ, ದಾಸವರೇಣ್ಯ ಭಕ್ತ ಕನಕದಾಸರ 538ನೇ ಜಯಂತಿಯನ್ನು ಆಚರಿಸಲಾಯಿತು.
ಶಾಸಕ ಡಾ. ಚಂದ್ರು ಲಮಾಣಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಕನಕದಾಸರು ದಾರ್ಶನಿಕ ಕವಿ, ಆಧ್ಯಾತ್ಮಿಕ ಚಿಂತಕರಾಗಿದ್ದರು. ಎಲ್ಲದಕ್ಕೂ ಧರ್ಮವೇ ಕಾರಣ. ಕನಕ ದಾಸರು ನಡುಗನ್ನಡ ಸಾಹಿತ್ಯದ ಪ್ರಮುಖ ಕೀರ್ತನಕಾರರಾಗಿದ್ದರು. ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತದ ಮೂಲ ಸಿದ್ಧಾಂತಗಳಿಗೆ ಎಂದೂ ಮರೆಯದ ಕಾಣಿಕೆ ನೀಡಿದ್ದಾರೆ. ಕನಕದಾಸರು ನಮ್ಮ ಪಕ್ಕದ ಜಿಲ್ಲೆ ಹಾವೇರಿ ಜಿಲ್ಲೆ ಬಾಡ ಗ್ರಾಮದವರು. ಕನ್ನಡ ನಾಡು ಎಂದೂ ಮರೆಯದ ಸಾಹಿತ್ಯವನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ. ಅವರ ಹಾಡುಗಳಲ್ಲಿ ಭಕ್ತಿ ತುಂಬಿಕೊಡಿದೆ. ಅಖಂಡ ಭಕ್ತಿಯಿಂದ ಮಾತ್ರ ದೇವರ ಸಾಕ್ಷಾತ್ಕಾರ ಸಾಧ್ಯ ಎಂದು ಜಗತ್ತಿಗೆ ಸಾರಿದ್ದಾರೆ. ಅವರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ನಿಂಗಪ್ಪ ಬನ್ನಿ, ವಿ.ಜಿ. ಪಡಿಗೇರಿ, ತಿಪ್ಪಣ್ಣ ಸಂಶಿ, ನೀಲಪ್ಪ ಪೂಜಾರ, ಶೇಕಣ್ಣ ಕಾಳೆ, ನೀಲಪ್ಪ ಶೆರಸೂರಿ ಸೇರಿದಂತೆ ಮತ್ತಿತರರು ಇದ್ದರು.


