ವಿಜಯಸಾಕ್ಷಿ ಸುದ್ದಿ, ಗದಗ: ನಾಡಿನ ಪುಣ್ಯದ ಫಲವಾಗಿ ಕನಕದಾಸರು ಜನಿಸಿ ಬಂದಿದ್ದಾರೆ. ನೂರಾರು ದಾರ್ಶನಿಕರಲ್ಲಿ ಕನಕದಾಸರು ಎದ್ದು ಕಾಣುತ್ತಾರೆ ಎಂದು ಕನಕಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಸಾಹಿತಿಗಳಾದ ಡಾ. ಲಿಂಗದಳ್ಳಿ ಹಾಲಪ್ಪ ಹೇಳಿದರು.
ನಗರದ ಕನಕ ಭವನದಲ್ಲಿ ಬೆಂಗಳೂರಿನ ಶ್ರೀ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಆಯೋಜಿಸಿದ್ದ ಶ್ರೀ ಕನಕ ಸಾಹಿತ್ಯ ಸಂಭ್ರಮದ 100ನೇ ಉಪನ್ಯಾಸದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರೊ. ಸುಧಾ ಕೌಜಗೇರಿ ಮಾತನಾಡಿ, ಕನಕದಾಸರು ಸಾಹಿತ್ಯ ಕ್ಷೇತ್ರದಲ್ಲಿ ನಕ್ಷತ್ರವಾಗಿ ಬೆಳೆದವರು. 12ನೇ ಶತಮಾನದಲ್ಲಿ ಶರಣ ಸಾಹಿತ್ಯ ಬಂತು. ಕನಕದಾಸರು ಏಕಾಂಗಿಯಾಗಿ ಬೆಳೆದವರು. ಸಂತ, ಭಕ್ತ, ಕವಿ ಅಲ್ಲದೆ ಅವರೊಬ್ಬ ಮಹಾನ್ ಹೋರಾಟಗಾರರಾಗಿದ್ದಾರೆ. ಅವರ ಮುಂಡಿಗೆಗಳಿಗೆ ಈವರೆಗೂ ಉತ್ತರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ರುದ್ರಣ್ಣ ಗುಳಗುಳಿ ಅವರು ಮಾತನಾಡಿ, ಈ ಕಾರ್ಯಕ್ರಮ ಸಂಘಟಿಸುವ ಹಿಂದೆ ಸಾಕಷ್ಟು ಶ್ರಮವಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಕೈಜೋಡಿಸಿ ಕನಕದಾಸರ ಸಾಹಿತ್ಯವನ್ನು ಇನ್ನಷ್ಟು ಜನರಿಗೆ ಪರಿಚಯಿಸಬೇಕಾಗಿದೆ ಎಂದರು.
ಚಿಂತಕ ಮಂಜುನಾಥ ಹೊನ್ನನವರ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ಕನಕದಾಸರು ನೀಡಿದ ಜೀವನ ತತ್ವ, ಚಿಂತನೆ, ಜ್ಞಾನ ಹಸಿವಿನಿಂದ ಆತ್ಮಸ್ಥೈರ್ಯ ಬೆಳೆಯಲು ಸಾಧ್ಯ. ಇಡೀ ಜಗತ್ತಿನ ನ್ಯೂನತೆ ಕಿತ್ತಾಟವಾಗಿದೆ. ಹಾಗಾಗಿ ಅಹಂಕಾರ ಬಿಡಬೇಕು. ಮನುಕುಲಕ್ಕೆ ಶಾಂತಿ ಮಂತ್ರ ನೀಡಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದರು.
ಡಾ. ಹನಮಗೌಡ ಪಾಟೀಲ ಮಾತನಾಡಿ, ಕನಕ ಸಂಭ್ರಮ ಕುಟುಂಬ, ವಿಜ್ಞಾನ, ತಂತ್ರಜ್ಞಾನ ಆವಿಷ್ಕಾರ, ಧಾರ್ಮಿಕ ಪ್ರಜ್ಞೆ ವಾಸ್ತವಿಕ ಅಂಶಗಳನ್ನು ತಿಳಿಸಲು ಸಂಶೋಧಕರು ಮುಂದಾಗಬೇಕು. ಕನಕ ಸಂದೇಶ ಎಲ್ಲ ಮಾಧ್ಯಮಗಳನ್ನು ಬಳಸಿಕೊಂಡು ಜನರಿಗೆ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಕೊಪ್ಪದ ಮಾತನಾಡಿ, ಈ ಕಾರ್ಯಕ್ರಮವನ್ನು ಸಂಘಟಿಸುವಲ್ಲಿ ಸಮಾಜದ ಹಿರಿಯರು ಹಾಗೂ ಎಲ್ಲ ತಾಲೂಕಿನ ನೌಕರರ ಬಾಂಧವರು ಅಲ್ಲಲ್ಲಿ ಸಭೆ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಅವರೆಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕ್ಕೀರಪ್ಪ ಹೆಬಸೂರ ಅಧ್ಯಕ್ಷತೆ ವಹಿಸಿದ್ದರು. ವಾಸಣ್ಣ ಕುರಡಗಿ, ರವಿ ದಂಡಿನ, ಪ್ರಕಾಶ ಕರಿ ಮಾತನಾಡಿದರು. ವೇದಿಕೆ ಮೇಲೆ ರಾಜಶೇಖರ ಕಲ್ಲೂರ, ಡಿಡಿಪಿಐ ಆರ್.ಎಸ್. ಬುರಡಿ, ರಾಮಕೃಷ್ಣ ರೊಳ್ಳಿ, ನಿಂಗಪ್ಪ ಸವಣೂರ, ಮಹಾಂತೇಶ ನಿಟ್ಟಾಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ನಂತರ ಶ್ರದ್ಧಾ ಕಬಾಡಿ, ಇಷಾ ಗಣಾಚಾರಿ ಅವರಿಂದ ಭರತನಾಟ್ಯ ಜರುಗಿತು. ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆ ಹಂತದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಕನಕದಾಸರ ಸಾಹಿತ್ಯ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ 76ರಿಂದ 100ನೇ ಆನ್ಲೈನ್ ಗೂಗಲ್ ಮೀಟ್ನಲ್ಲಿ ಕನಕದಾಸರ ಸಾಹಿತ್ಯದ ಉಪನ್ಯಾಸ ನೀಡಿದವರಿಗೆ ಸನ್ಮಾನಿಸಲಾಯಿತು.
ಸಮಿತಿಯ ರಾಜ್ಯ ಸಮನ್ವಯಾಧಿಕಾರಿ ಕೃಷ್ಣ ಖಾನಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಮಾರುತಿ ಮಡ್ಡಿ ಸ್ವಾಗತಿಸಿದರು. ಆರ್.ಜಿ. ಕೊರ್ಲಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕೆರಿ ವಂದಿಸಿದರು.
ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಪ್ರೊ. ಎಫ್.ಟಿ. ಹಳ್ಳಿಕೇರಿ ಮಾತನಾಡಿ, ಸಂಘಟನೆ ಶ್ರದ್ಧೆ, ಶ್ರಮದಿಂದ 100ನೇ ಮಾಲಿಕೆ ಸಾಧ್ಯವಾಗಿದೆ. ಗದಗ ಜಿಲ್ಲೆ ಹಾಲಮತ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದೆ. 1920ರಲ್ಲಿ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರಿನಲ್ಲಿ ಟ್ರೇನಿಂಗ್ ಸೆಂಟರ್ ತೆರೆದಿದ್ದರು. ಹಾಲಮತ ಚರಿತ್ರೆಯನ್ನು ಬೆಳಕಿಗೆ ತಂದ ವಿ.ಆರ್. ಹನಮಂತಯ್ಯ ಅವರನ್ನು ಹಾಲುಮತ ಪಿತಾಮಹ ಎಂದು ಕರೆಯಬಹುದು. ಸಾಹಿತ್ಯ, ಸಮಾಜ ಬೆಳವಣಿಗೆ, ಡೊಳ್ಳಿನ ಹಾಡು ಸಂಗ್ರಹಿಸಿ ಸಂಪುಟ ಹೊರತರಬೇಕು. ಮನೆ ಮನೆಗೂ ಕನಕದಾಸರ ಸಾಹಿತ್ಯ ತಲುಪಿಸಬೇಕಾಗಿದೆ. ನಮ್ಮ ಆರಾಧ್ಯ ದೈವದ ಬಗೆಗೆ ಇರುವ ಹಲವು ಗೊಂದಲ ನಿವಾರಿಸಬೇಕಾಗಿದೆ ಎಂದರು.



