ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಮಂಡ್ಯದಲ್ಲಿ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರನಾಡ ಕನ್ನಡಿಗರಿಗಾಗಿಯೇ ಮೊಟ್ಟ ಮೊದಲ ಬಾರಿಗೆ ಗೋಷ್ಠಿ ಏರ್ಪಡಿಸಿದ್ದು ಸ್ವಾಗತಾರ್ಹವಾದದ್ದು. ಸ್ವತಃ ಮಹೇಶ ಜೋಶಿಯವರೇ ಖುದ್ದಾಗಿ ಹಲವಾರು ರಾಷ್ಟ್ರಗಳನ್ನು ಸಂದರ್ಶಿಸಿ ಅಲ್ಲಿನ ಕನ್ನಡ ಸಂಘಟಕರನ್ನು ಭೇಟಿಯಾಗಿ ಆಹ್ವಾನಿಸಿದ್ದರಿಂದ ಐರೋಪ್ಯ ಹಾಗೂ ವಿವಿಧ ರಾಷ್ಟ್ರಗಳ ೧೮೦ ಜನ ಪ್ರತಿನಿಧಿಗಳು ಆಗಮಿಸಿ ಅಲ್ಲಿನ ಚಟುವಟಿಕೆ, ಕಾರ್ಯಕ್ರಮಗಳ ಬಗ್ಗೆ ಸಂತೋಷ ಹಂಚಿಕೊಂಡರು.
ತಾವು ಅನಿವಾಸಿ ಭಾರತೀಯರಾದರೂ, ವಿದೇಶದಲ್ಲಿದ್ದು ಮಕ್ಕಳಿಗೆ ಕನ್ನಡ ಕಲಿಕೆ, ನಾಡು-ನುಡಿಯ ಬಗ್ಗೆ ಅಭಿಮಾನ, ನೃತ್ಯ-ಕಲೆ, ಸಂಗೀತಗಳಂಥ ಸಾಂಸ್ಕೃತಿಕ ಸಭೆ ಸಂಘಟಸಿದ್ದಲ್ಲದೆ ಶಿವರಾತ್ರಿ, ದೀಪಾವಳಿ, ಯುಗಾದಿ, ರಾಜ್ಯೋತ್ಸವಗಳಂಥ ರಾಷ್ಟ್ರೀಯ ಮತ್ತು ಧಾರ್ಮಿಕ ಆಚರಣೆಗಳನ್ನು ಪರಿಚಯಿಸಿದ್ದು ಸ್ತುತ್ಯಾರ್ಹ. ಇಂಥ ಕಾರ್ಯಕ್ರಮಗಳಿಗೆ ಧನಸಹಾಯ ಅವಶ್ಯವಿರುವುದರಿಂದ ಅಲ್ಲಿನ ಸ್ಥಳೀಯರ ಸಹಾಯ ಸಹಕಾರ ಪಡೆದು ಯಶಸ್ವಿಯಾಗಿಸಿದ್ದಾರೆ.
ಪೋಲಂಡ್ನಲ್ಲಿ ಕನ್ನಡಿಗರ ಸಂಘ ಮತ್ತು ರಾಸ್ಲಾ ಕನ್ನಡ ಸಂಘದ ಸಂಯುಕ್ತಾಶ್ರಯದೊAದಿಗೆ ಕಳೆದ ಏಳು ವರ್ಷಗಳಿಂದ ಅಲ್ಲಿನ ಕನ್ನಡಿಗ ನಗರದ ಪಂಚಾಕ್ಷರಿ ಲಕ್ಮೇಶ್ವರ ಮಠ ಹಾಗೂ ಸಚಿನ್ ನಿರಂತರ ಶ್ರಮಿಸುತ್ತಿದ್ದಾರೆ. ಇವರ ಸಾಧನೆ ಪರಿಗಣಿಸಿ ಮಹೇಶ ಜೋಶಿ, ಮೋಹನ ಚುಂತಾರು ಮತ್ತು ನಿವೇದಿತಾ ಹಾವನೂರು (ಹೊನ್ನತ್ತಿ) ಅವರು ನಿರಂತರ ಸಂಪರ್ಕದಲ್ಲಿದ್ದು, ಆಹ್ವಾನಿಸಿ ವೇದಿಕೆಯಲ್ಲಿ ಅವರಿಗಾಗಿಯೇ ಪ್ರತ್ಯೇಕ ಗೋಷ್ಠಿ ಏರ್ಪಡಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಇದೇ ಸಮಯದಲ್ಲಿ ಕರ್ನಾಟಕ ಸರ್ಕಾರವು ಇಂತ ಸಂಘಟನೆಗಳಿಗೆ ಧನ ಸಹಾಯ ನೀಡಿದರೆ ವಿದೇಶಿ ಕನ್ನಡಿಗರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಸರ್ಕಾರದ ಗಮನ ಸೆಳೆದರು. ಪಂಚಾಕ್ಷರಿ ಲಕ್ಮೇಶ್ವರ ಮಠ ಅವರು ನಗರದ ಸಾಹಿತಿ ಎಫ್.ಪಿ. ಲಕ್ಮೇಶ್ವರ ಮಠರ ಪುತ್ರರಾಗಿದ್ದಾರೆ.



