ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಕರ್ನಾಟಕ ಸಂಭ್ರಮ 50ರ ಅಂಗವಾಗಿ ಗುರುವಾರ ಪಟ್ಟಣಕ್ಕೆ ಜ್ಯೋತಿ ರಥಯಾತ್ರೆಯನ್ನು ಗದಗ ನಾಕಾ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಪುರಸಭೆ, ತಾಲೂಕಾಡಳಿತ, ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತಿಗಳು, ಮುಖಂಡರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಗಮಿಸಿ ಕನ್ನಡ ತೇರಿಗೆ ಹಾರವನ್ನು ಹಾಕುವ ಮೂಲಕ ಸ್ವಾಗತಿಸಿದರು.
ಕರ್ನಾಟಕ ನಾಮಕರಣಗೊಂಡ 50ನೇ ವರ್ಷದ ಸುವರ್ಣ ಸಂಭ್ರಮದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ತೇರಿನ ಜ್ಯೋತಿ ರಥಯಾತ್ರೆ ಪಟ್ಟಣಕ್ಕೆ ಆಗಮಿಸಿದಾಗ ಕನ್ನಡ ಪರ ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು.
ಕಸಾಪ ತಾಲೂಕಾಧ್ಯಕ್ಷ ಈಶ್ವರ ಮೇಡ್ಲೇರಿ ಮಾತನಾಡಿ, ನಮ್ಮ ನಾಡಿಗೆ 1973ರಲ್ಲಿ ಕರ್ನಾಟಕ ಎಂದು ನಾಮಕರಣವಾಗಿ 50ನೇ ವರ್ಷದ ಸಂಭ್ರಮ ಮೆರೆದಿದ್ದೇವೆ. ಕನ್ನಡಿಗರ ನಾಡನ್ನು ಮೈಸೂರು ರಾಜ್ಯದಿಂದ ಕರ್ನಾಟಕ ಎಂದು ಹೆಸರಿಡಲು ಗದಗ ಜಿಲ್ಲೆಯಿಂದಲೇ ಅಭಿಯಾನ ಪ್ರಾರಂಭವಾಗಿರುವುದು ನಮ್ಮ ಹೆಮ್ಮೆ.
ನಮ್ಮ ಜಿಲ್ಲೆಯವರಾದ ಆಲೂರು ವೆಂಕಟರಾವ್, ಅಂದಾನಪ್ಪ ದೊಡ್ಡಮೇಟಿಯವರಂತಹ ಮಹನೀಯರು ಕರ್ನಾಟಕ ಏಕೀಕರಣ ಚಟುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡರು. ಕನ್ನಡ ನಮ್ಮ ನಿತ್ಯ ನೂತನ ಭಾಷೆಯಾಗಲಿ. ಕನ್ನಡ ಭಾಷೆ-ಸಂಸ್ಕೃತಿ, ನೆಲ-ಜಲದ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಜವಾಬ್ದಾರಿಗಳ ಆತ್ಮಾವಲೋಕನವಾಗಬೇಕಿದೆ. ಕನ್ನಡ ನಮ್ಮ ಬದುಕಿನ, ಅನ್ನದ ಭಾಷೆಯಾಗಿ ನಿತ್ಯ ಜೀವನದಲ್ಲಿ ಬಳಕೆಯಾಗಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಹಿರಿಯ ಸಾಹಿತಿಗಳಾದ ಸಿ.ಜಿ. ಹಿರೇಮಠ, ಪೂರ್ಣಾಜಿ ಖರಾಟೆ, ರಮೇಶ ನವಲೆ, ಬಸವರಾಜ ಬಾಳೇಶ್ವರಮಠ, ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಮುರಳೀಧರ ಹುಬ್ಬಳ್ಳಿ, ಮಂಜುನಾಥ ಚಾಕಲಬ್ಬಿ, ಈರಣ್ಣ ಗಾಣಿಗೇರ, ಡಾ. ಎಸ್.ಜಿ. ಹೂವಿನ, ಎಂ.ವಿ. ಹೂಗಾರ, ಎಸ್.ವಿ. ಕನೋಜ್, ಎಲ್.ಆರ್. ಮಲ್ಲಸಮುದ್ರ, ಸತೀಶ ಬೋಮಲೆ, ಉಮೇಶ ನೇಕಾರ, ದೇವಪ್ಪ ನಂದೆಣ್ಣವರ, ನಿಂಗಪ್ಪ ತಹಸೀಲ್ದಾರ, ಎನ್.ಎ. ಮುಲ್ಲಾ, ಸದಾನಂದ ನಂದೆಣ್ಣವರ, ಸುರೇಶ ಕೊರಡೂರ, ಮೋಹನ ನಂದೆಣ್ಣವರ, ಪಿಎಸ್ಐ ಈರಪ್ಪ ರಿತ್ತಿ ಸೇರಿದಂತೆ ಅನೇಕರಿದ್ದರು.
ಗದಗ ನಾಕಾದಿಂದ ಪ್ರಾರಂಭವಾದ ಮೆರವಣಿಗೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿಯ ಘೋಷಣಾ ಫಲಕಗಳನ್ನು ಹಿಡಿದು ದಾರಿಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಚಂದನ ಶಾಲೆಯ ಮಕ್ಕಳ ಬ್ಯಾಂಡ್ ತಂಡದ ವಾದ್ಯಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು. ಡೊಳ್ಳು ಕುಣಿತ, ಸೂರಣಗಿಯ ಪುರವಂತ ತಂಡದವರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ ಮಾತನಾಡಿ, ಕನ್ನಡತನದ ಘಮ ಎಲ್ಲೆಡೆ ಪಸರಿಸಲು ಕನ್ನಡಿಗರೇ ಮುಂದಾಗಬೇಕಿದೆ. ಯುವಪೀಳಿಗೆ ಕನ್ನಡವನ್ನು ಪ್ರೀತಿಸಿ, ಗೌರವಿಸಬೇಕು. ಅದಕ್ಕಾಗಿ ಮನೆ-ಮನಗಳಲ್ಲಿ ಕನ್ನಡದ ಹಬ್ಬ ನಿತ್ಯೋತ್ಸವವಾಗಬೇಕು. ಕನ್ನಡ ಕೇವಲ ಭಾಷೆಯಲ್ಲ, ಅದೊಂದು ವಿಶಿಷ್ಟ ಸಂಸ್ಕೃತಿ, ಹಲವು ಒಳಿತು, ಶ್ರೇಷ್ಠತೆಗಳ ಸಂಗಮವೇ ಆಗಿದೆ ಎಂದರು.