ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕನ್ನಿಕಾಪರಮೇಶ್ವರಿಯು ಪಾರ್ವತಿ ದೇವಿಯ ಅಂಶವಾಗಿದ್ದು, ಆರ್ಯವೈಶ್ಯ ಸಮಾಜದ ಪ್ರಮುಖ ದೇವತೆಯಾಗಿದ್ದಾಳೆ. ಭಕ್ತರ ಅಭೀಷ್ಟೆಗಳನ್ನು ನೆರವೇರಿಸುವಲ್ಲಿ ಯಾವಾಗಲೂ ಮುಂದಾಗಿರುವ ಈ ದೇವತೆಯನ್ನು ಪೂಜಿಸುವುದರಿಂದ ನಮ್ಮ ಬಯಕೆಗಳು ಈಡೇರುತ್ತವೆ ಎಂದು ನರೇಗಲ್ಲ ಆರ್ಯವೈಶ್ಯ ಸಮಾಜದ ಅಧ್ಯಕ್ಷ ರಾಮಣ್ಣ ನವಲಿ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಚರಿಸಲಾದ ಕನ್ನಿಕಾ ಪರಮೇಶ್ವರಿ ಜಯಂತಿಯಲ್ಲಿ ಅವರು ಮಾತನಾಡಿದರು.
ನರೇಗಲ್ಲ ಪಟ್ಟಣದಲ್ಲಿ ಆರ್ಯವೈಶ್ಯ ಸಮಾಜದ ಕೆಲವೇ ಕೆಲವು ಕುಟುಂಬಗಳಿದ್ದರೂ ಇಲ್ಲಿಯೂ ಒಂದು ದೇವಸ್ಥಾನವನ್ನು ನಿರ್ಮಿಸಬೇಕೆಂಬುದು ನಮ್ಮೆಲ್ಲರ ಕನಸಾಗಿತ್ತು. ದೇವಿ ಕನ್ನಿಕಾಪರಮೇಶ್ವರಿಯ ಆಶೀರ್ವಾದ ಮತ್ತು ಸಮಾಜದ ಎಲ್ಲ ಜನತೆಯ ಸಹಕಾರದಿಂದ ಈ ಭವ್ಯವಾದ ದೇವಸ್ಥಾನ ನಿರ್ಮಾಣವಾಗಿದೆ ಎಂದರು.
ಶ್ರೀ ಕನ್ನಿಕಾ ಪರಮೇಶ್ವರಿಯ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಡೊಳ್ಳು, ಭಾಜಾಭಜಂತ್ರಿ ಮೂಲಕ ಗ್ರಾಮಪ್ರದಕ್ಷಿಣೆ ಮಾಡಲಾಯಿತು. ದೇವಸ್ಥಾನದಿಂದ ಹೊರಟ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು.
ಚಂದ್ರಹಾಸ ಇಲ್ಲೂರ, ಅಶೋಕ ನವಲಿ, ರಾಮಚಂದ್ರ ಬೆಟದೂರ, ಮಹೇಶ ನವಲಿ, ಮಂಜುನಾಥ ನವಲಿ, ಚಂದ್ರಹಾಸ ಇಂಗಳಹಳ್ಳಿ, ಮನೋಹರ ಗುಡಿಸಾಗರ, ನಾಗೇಶ ಗುಡಿಸಾಗರ, ಮುತ್ತುರಾಜ ದೇವರಂಗಡಿ, ವೆಂಕಟೇಶ ಕಣಿವಿಹಳ್ಳಿ, ಅಮಿತ ದೇವರಂಗಡಿ, ಈರಣ್ಣ ಇಲ್ಲೂರ, ಸುರೇಶ ನವಲಿ ಮುಂತಾದವರು ಉಪಸ್ಥಿತರಿದ್ದರು.