ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಮ್ ಕನ್ನಡ ಬಗ್ಗೆ ಆಡಿರುವ ಮಾತುಗಳು ಆಕ್ರೋಶಕ್ಕೆ ಕಾರಣವಾಗಿದೆ. ಪಹಲ್ಗಾಮ್ ದಾಳಿಗೂ ಕನ್ನಡಕ್ಕೂ ಸಂಬಂಧ ಕಲ್ಪಿಸಿರುವ ಸೋನು ನಿಗಂ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ.
ಕನ್ನಡ ಭಾಷೆಗೂ ಪಹಲ್ಗಾಮ್ ದಾಳಿಗೂ ಹೋಲಿಕೆ ಮಾಡಿರೋ ಸೋನು ನಿಗಮ್ ವಿರುದ್ಧ ಕನ್ನಡಿಗರು, ಕನ್ನಡ ಸಂಘಟನೆಗಳು ಕಿಡಿ ಕಾರ್ತಿದ್ದಾರೆ. ಇನ್ಮೇಲೆ ಕನ್ನಡ ಚಿತ್ರರಂಗದಲ್ಲಿ ಸೋನು ಸಿಗಮ್ ಅವ್ರಿಗೆ ಹಾಡು ಹಾಡೋಕೆ ಅವಕಾಶನೇ ಕೊಡಬಾರ್ದು ಅಂತಾ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕನ್ನಡಪರ ಸಂಘಟನೆಯ ರೂಪೇಶ್ ರಾಜಣ್ಣ ದೂರು ನೀಡಿದ್ದಾರೆ. ಜೊತೆಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಕೂಡ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಫಿಲ್ಮ್ ಚೇಂಬರ್ ಉಪಾಧ್ಯಕ್ಷ, ನಿರ್ಮಾಪಕ ಸಂಘದ ಅಧ್ಯಕ್ಷರು ದೂರು ಸ್ವೀಕರಿಸಿ ಸೋನು ನಿಗಮ್ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಇಂದು ಫಿಲ್ಮ್ ಚೇಂಬರ್ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕನ್ನಡ ಚಿತ್ರಗಳಲ್ಲಿ ಸೋನು ನಿಗಮ್ಗೆ ಹಾಡಲು ಅವಕಾಶ ಕೊಡಬೇಕಾ.. ಬೇಡ್ವಾ ಎಂಬ ನಿರ್ಧಾರ ಮಾಡಲಾಗುತ್ತೆ.
ಕನ್ನಡ ಸಂಘಟನೆ ದೂರಿನ ಬೆನ್ನಲ್ಲೇ.. ಗಾಯಕ ಸೋನು ನಿಗಮ್ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.
ವಿವಾದದ ಬಳಿಕ ಮೊದಲ ಬಾರಿಗೆ ಹೇಳಿಕೆ ನೀಡಿರುವ ಸೋನು ನಿಗಮ್. ಮೃದುವಾಗಿ ಕನ್ನಡ.. ಕನ್ನಡ ಎನ್ನೋದಕ್ಕೂ ಬೆದರಿಕೆಯೊಡ್ಡುವ ರೀತಿಯಲ್ಲಿ ಕೂಗೋದಕ್ಕೂ ವ್ಯತ್ಯಾಸವಿದೆ ಎಂದು ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಆದರೂ ಸೋನು ನಿಗಮ್ ಬಂಧನಕ್ಕೆ ಒತ್ತಾಯಿಸಿ ಇಂದು ಕರವೇ ನಾರಾಯಣ ಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.