ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣಕ್ಕೆ 1 ತಿಂಗಳಿಂದ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಂಡಿರುವುದಕ್ಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣವಾಗಿದೆ.
ಸೆ.20ರೊಳಗಾಗಿ ಕುಡಿಯುವ ನೀರು ಪೂರೈಕೆಯಾಗದಿದ್ದರೆ ಸೆ.21ಕ್ಕೆ ಲಕ್ಷ್ಮೇಶ್ವರ ಬಂದ್ಗೆ ಕರೆ ನೀಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ ಎಚ್ಚರಿಕೆ ನೀಡಿದರು.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ಪೂರೈಕೆಯಾಗುವ ನೀರು ಸರಬರಾಜಿನ ಪೈಪ್ಲೈನ್, ಶುದ್ಧೀಕರಣ ಘಟಕದಲ್ಲಿನ ನೀರೆತ್ತುವ ಮೋಟರ್, ಯಂತ್ರೋಪಕರಣಗಳ ದುರಸ್ಥಿಯನ್ನೇ ಬಂಡವಾಳವಾಗಿಸಿಕೊಂಡ ಅಧಿಕಾರಿಗಳು ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಆದರೆ ಮಳೆಗಾಲದಲ್ಲೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗದೇ ಪಟ್ಟಣದ ಜನತೆಯ ನೀರಿನ ಬವಣೆ ತಪ್ಪದಂತಾಗಿದೆ. ಜನರ ಅಗತ್ಯ ಸೌಲಭ್ಯಗಳಲ್ಲೊಂದಾಗ ನೀರು ಪೂರೈಕೆಯಲ್ಲಿ ಹಲವು ವರ್ಷಗಳಿಂದ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ, ಬೇಜವಾಬ್ದಾರಿ ತೋರಿದ್ದಾರೆ.
ಕುಡಿಯುವ ನೀರು ಸರಬರಾಜಿನ ವ್ಯವಸ್ಥೆಗಾಗಿ ಮಾಡಿರುವ ಲಕ್ಷಾಂತರ ರೂ ಖರ್ಚು-ವೆಚ್ಚದ ಲೆಕ್ಕದಲ್ಲಿ ಸಾಕಷ್ಟು ಅವ್ಯವಹಾರವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು. ಸಂಪೂರ್ಣ ತನಿಖೆ ಆಗುವವರೆಗೂ ಹೋರಾಟ ನಿರಂತರವಾಗಿರುತ್ತದೆ. ಸದ್ಯ ಇರುವ ಪೈಪ್ಲೈನ್ ವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜಿಗಾಗಿ ತುಂಗಭದ್ರಾ ನದಿ ಪಾತ್ರದ ಹಮ್ಮಗಿ ಬ್ಯಾರೇಜ್ ಹಿನ್ನೀರಿನ ಪ್ರದೇಶದಿಂದ ನೀರೆತ್ತುವ ಯೋಜನೆ ಜಾರಿಗೊಳಿಸಬೇಕು. ಅದಕ್ಕಾಗಿ ಈ ಭಾಗದ ಎಲ್ಲ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಆಡೂರ, ಪ್ರವೀಣ ಆಚಾರಿ, ಗೌಸ್ ಮೋದಿನ್, ತಿಪ್ಪಣ್ಣ ರೊಟ್ಟಿಗವಾಡ, ಮಹಮ್ಮದಲಿ ಶಿಗ್ಗಾವಿ, ಮೈನು ಮನಿಯಾರ, ಮಂಜುನಾಥ ಹೊತ್ತಗಿವ್ಮಠ, ಕೈಸರ್ ಮಹಮ್ಮದ್ಲಿ ಸೇರಿದಂತೆ ಕಾರ್ಯಕರ್ತರಿದ್ದರು.
ವೇದಿಕೆಯ ತಾಲೂಕಾಧ್ಯಕ್ಷ ನಾಗೇಶ ಅಮರಾಪುರ ಮಾತನಾಡಿ, ಪಟ್ಟಣದಲ್ಲಿನ ಬೋರ್ವೆಲ್ಗಳು ಬಹುತೇಕ ದುರಸ್ಥಿಗೊಳಗಾಗಿವೆ. ಲಕ್ಷಾಂತರ ರೂ ಖರ್ಚು ಮಾಡಿ ಹತ್ತಾರು ವರ್ಷಗಳಿಂದ ನಿರ್ಮಿಸಿದ ಜಲಾಗಾರಗಳು ನಿರುಪಯುಕ್ತವಾಗಿವೆ. ನೀರಿನ ವಿಷಯದಲ್ಲಿ ಹೆಚ್ಚಿನ ಅಧಿಕಾರಿಗಳು ಸಾಕಷ್ಟು ಲೋಪವೆಸಗಿದ್ದಾರೆ. ಜನರ ತಾಳ್ಮೆ ಎಲ್ಲೆ ಮೀರಿದ್ದು, ಬರುವ ದಿನಗಳಲ್ಲಿ ನೀರಿಗಾಗಿ ಹೋರಾಟಗಳು ತೀವ್ರಗೊಳ್ಳಲಿವೆ. ಅಧಿಕಾರಿ ಮತ್ತು ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಹೇಳಿದರು.