ವಿಜಯಸಾಕ್ಷಿ ಸುದ್ದಿ, ಗದಗ : ಪ್ರಥಮ ಕಲ್ಪದಲ್ಲಿ ಶ್ರೀಹರಿಯಿಂದ ನಿರ್ಮಿತವಾಗಿ `ವಿಷ್ಣುಪಲ್ಲಿ’ ಎಂತಲೂ, ದ್ವಾಪರಯುಗದಲ್ಲಿ ವಿರಾಟರಾಜನ ಮಗ ಶ್ವೇತನಿಂದ ನಿರ್ಮಿತವಾಗಿ `ಪುರಿಕರ’ ಎಂತಲೂ ಪ್ರಸಿದ್ಧವಾಗಿದ್ದ ಲಕ್ಷ್ಮೇಶ್ವರ ಪಟ್ಟಣದ ಪ್ರಾಚೀನತೆ ರಾಮಾಯಣ, ಮಹಾಭಾರತ ಕಾವ್ಯಗಳಿಗಿಂತಲೂ ಹಿಂದಕ್ಕೆ ಹೋಗುತ್ತದೆ.
ಈ ಪಟ್ಟಣವು ಪುಲಿಗೆರೆ-300 ಆಡಳಿತ ವಿಭಾಗದ ರಾಜಧಾನಿಯಾಗಿತ್ತು. ಕಲ್ಯಾಣದ ಚಾಳುಕ್ಯರ ಮಹಾಮಂಡಳೇಶ್ವರ ಲಕ್ಷ್ಮರಸನು ಇಲ್ಲಿ ತನ್ನ ಹೆಸರಿನ ಲಕ್ಷ್ಮಣೇಶ್ವರ ದೇವಾಲಯ ನಿರ್ಮಿಸಿ, ಅದಕ್ಕೆ ಆ ರೀತಿ ನಾಮಕರಣ ಮಾಡಿದ ಕಾರಣ ಪುಲಿಗೆರೆಗೆ ಲಕ್ಷ್ಮಣೇಶ್ವರ, ಲಕ್ಷ್ಮೇಶ್ವರ ಎಂಬ ಹೆಸರು ಬಂದಿದೆ ಎಂದು ಇತಿಹಾಸ ಸಂಶೋಧಕ ಮತ್ತು ಪ್ರವಾಸಿ ಮಾರ್ಗದರ್ಶಿ ಅ.ದ. ಕಟ್ಟಿಮನಿ ಹೇಳಿದರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗದ ೬ನೆಯ ಸೆಮಿಸ್ಟರ್ ವಿದ್ಯಾರ್ಥಿಗಳು ಡಾ. ಅಪ್ಪಣ್ಣ ಹಂಜೆ ಅವರ ಮಾರ್ಗದರ್ಶನದಲ್ಲಿ ‘ಲಕ್ಷ್ಮೇಶ್ವರದ ಇತಿಹಾಸ ಮತ್ತು ಸ್ಮಾರಕಗಳು’ ಕುರಿತು ಕ್ಷೇತ್ರಕಾರ್ಯ ಅಧ್ಯಯನ ಕೈಗೊಂಡಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಲಕ್ಷ್ಮೇಶ್ವರದ ಸ್ಮಾರಕಗಳ ವಾಸ್ತುಶಿಲ್ಪ ಹಿರಿಮೆಯನ್ನು ಪರಿಚಯಿಸಿದರು.
ಇಲ್ಲಿಯ ಶಂಖ ಬಸದಿ, ಅನಂತನಾಥ ತ್ರಿಕೂಟ ಬಸದಿ, ಸೋಮೇಶ್ವರ ದೇವಾಲಯ, ಹಜರತ ದೂದ ನಾನಾ ದರ್ಗಾದ ವಾಸ್ತು ಲಕ್ಷಣಗಳು, ಪ್ರಾಚೀನ ಬಾವಿಗಳು, ಪುಷ್ಕರಣಿಗಳು ಮುಂತಾದ ಲೌಕಿಕ ವಾಸ್ತು ನಿರ್ಮಾಣಗಳ ವೈಶಿಷ್ಟ್ಯಗಳು ಮತ್ತು ಸಹಸ್ರಕೂಟ, ವೃಷಭಾರೂಢ ಶಿವ-ಪಾರ್ವತಿ ಮುಂತಾದ ಅಪರೂಪ ಶಿಲ್ಪಗಳ ಪ್ರತಿಮಾ ಲಕ್ಷಣಗಳನ್ನು ವಿವರಿಸಿದರು.