ಪ್ರೋಮೋ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕಿರಣ್ ರಾಜ್, ಭವ್ಯಾ ಗೌಡ ಹಾಗೂ ನಮೃತಾ ಕಾಂಬಿನೇಷನ್ ನ ಕರ್ಣ ಧಾರವಾಹಿ ಆರಂಭಕ್ಕೂ ಮುನ್ನವೇ ವಿಘ್ನ ಎದುರಿಸಿದೆ. ಅಂದುಕೊಂಡಂತೆ ಆಗಿದ್ದರೆ ನಿನ್ನೆಯಿಂದಲೇ ಧಾರವಾಹಿ ಪ್ರಸಾರವಾಗಬೇಕಿತ್ತು. ಆದರೆ ಧಾರವಾಹಿ ಒಳಗಿನ ಕೆಲವೊಂದು ಕಾರಣದಿಂದಾಗಿ ಸದ್ಯಕ್ಕೆ ಕರ್ಣ ಧಾರವಾಹಿಯನ್ನು ಮುಂದೂಡಲಾಗಿದೆ.
ಈ ಬಗ್ಗೆ ಮಾತನಾಡಿರುವ ನಟ ಕಿರಣ್ ರಾಜ್, ಎಲ್ಲರಿಗೂ ನಮಸ್ಕಾರ, ನಾನು ಕರ್ಣನಾಗಿ ನಿಮ್ಮೆಲ್ಲರ ಮನೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇದಕ್ಕೆ ಮೊದಲಿಗೆ ನಾನು ಎಲ್ಲ ಪ್ರೇಕ್ಷಕರ ಕ್ಷಮೆ ಕೇಳುತ್ತೇನೆ. ನೀವು ಕೊಟ್ಟ ಸ್ಪಂದನೆ, ಪ್ರೀತಿಗೆ ನಾವು ಕೂಡ ಈ ಸೀರಿಯಲ್ ಅನ್ನ ನಿಮ್ಮ ಮುಂದೆ ಇಡಬೇಕು ಎಂದು ಉತ್ಸಾಹದಿಂದ ಕಾದಿದ್ವಿ. ಪ್ರತಿ ದಿನವೂ ನಮ್ಮ ಸೀರಿಯಲ್ ಯಾವಾಗ ಲಾಂಚ್ ಆಗುತ್ತೆ? ಯಾವಾಗ ಎಂಟು ಗಂಟೆಯಾಗುತ್ತೆ. ಯಾವಾಗ ನೀವು ಮೊದಲ ಎಪಿಸೋಡ್ ನೋಡ್ತೀರಿ? ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ? ಎನ್ನುವ ಕುತೂಹಲ ನಮ್ಮಲ್ಲೂ ಇತ್ತು ಎಂದು ಕಿರಣ್ ರಾಜ್ ಹೇಳಿದ್ದಾರೆ.
ನಾನು ಕೂಡ ಈ ದಿನಕ್ಕೆ ಕಾಯುತ್ತಿದ್ದೆ. ಸುಮಾರು ಎರಡು ವರ್ಷಗಳ ನಂತರ ನಿಮ್ಮ ಮುಂದೆ, ನಿಮ್ಮ ಮನೆಗೆ ಕರ್ಣನಾಗಿ ಬರಬೇಕು ಅಂದುಕೊಂಡಿದ್ದೆ. ಆದರೆ ನನಗೆ ತಿಳಿದಿರುವ ಮಾಹಿತಿ ಪ್ರಕಾರ ಏನೋ ಲೀಗಲ್ ಸಮಸ್ಯೆ ಆಗಿದೆ. ಇದನ್ನು ಪರಿಹರಿಸಿಕೊಂಡು ಆದಷ್ಟು ಬೇಗನೆ ನಿಮ್ಮ ಮುಂದೆ ಬರ್ತೀವಿ, ಸ್ವಲ್ಪ ತಡ ಆಗಬಹುದು, ಆದರೆ ಬಂದೇ ಬರ್ತೀವಿ. ನಮಗೆ ಇನ್ನು ಸ್ವಲ್ಪ ಸಮಯ ಕೊಡಿ. ಇದು ಈ ಸಮಯದಲ್ಲಿ ಆಗಬಾರದಿತ್ತು. ಆದರೆ ಯಾವುದೂ ನಮ್ಮ ಕೈಯಲ್ಲಿ ಇಲ್ಲ ಎಂದಿದ್ದಾರೆ.
ನಿರ್ಮಾಪಕರು ಕೋಟಿ ಕೋಟಿ ಖರ್ಚು ಮಾಡಿ ಒಂದು ಒಳ್ಳೆಯ ಪ್ರಾಜೆಕ್ಟ್ ಅನ್ನ ನಿಮ್ಮ ಮುಂದೆ ಇಡಬೇಕು ಎನ್ನುವ ದೃಢಸಂಕಲ್ಪಕ್ಕೆ, ಹಲವು ಕಲಾವಿದರ ಪರಿಶ್ರಮಕ್ಕೆ ಹಾಗೂ ಕರ್ಣನಿಗೆ ನ್ಯಾಯ ಸಿಕ್ಕೇ ಸಿಗುತ್ತೆ. ಈ ಸಮಯದಲ್ಲಿ ನಿಮ್ಮ ಬೆಂಬಲ ನಮಗೆ ಬೇಕಿದೆ ಎಂದು ಕಿರಣ್ ರಾಜ್ ಕೇಳಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಭವ್ಯಾ ಗೌಡ ಅವರ ಕಾರಣದಿಂದ ಧಾರಾವಾಹಿಯ ಪ್ರಸಾರ ಮುಂದೂಡಿದೆ ಎಂದು ಹೇಳಲಾಗುತ್ತಿದೆ. ಭವ್ಯಾ ಗೌಡ ಹಾಗೂ ಧಾರವಾಹಿ ತಂಡದಲ್ಲಿ ವೈಮನಸ್ಸು ಮೂಡಿದ್ದು ಇದೇ ಕಾರಣಕ್ಕೆ ಧಾರವಾಹಿಯಿಂದ ಭವ್ಯಾ ಗೌಡ ಹೊರ ಬಂದಿದ್ದಾರೆ. ಭವ್ಯಾ ಗೌಡ ಜಾಗಕ್ಕೆ ಬೇರೆ ನಟಿಯನ್ನು ಧಾರವಾಹಿ ತಂಡ ಹುಡುಕುತ್ತಿದೆ ಎನ್ನಲಾಗುತ್ತಿದೆ. ಅಲ್ಲದೆ ಭವ್ಯಾ ಗೌಡ ಅವರ ಅಕೌಂಟ್ನಿಂದಲೂ ಕರ್ಣ ಧಾರಾವಾಹಿಗೆ ಸಂಬಂಧಿಸಿದ ಎಲ್ಲ ಪ್ರೋಮೋಗಳನ್ನು ಡಿಲೀಟ್ ಮಾಡಲಾಗಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.