ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಕೆಎಸ್ಆರ್ಟಿಸಿ ಚಾಲಕನ ಮೇಲೆ ಎಂಇಎಸ್ ಪುಂಡರು ನಡೆಸಿದ್ದ ಪುಂಡಾಟಿಕೆಯನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಕರೆದಿದ್ದ ಕರ್ನಾಟಕ ಬಂದ್ಗೆ ನರೇಗಲ್ಲ ಹೋಬಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಬೆಳಿಗ್ಗೆ ಜನಜೀವನ ಮಾಮೂಲಾಗಿತ್ತು. ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಎಂದಿನಂತೆ ಇತ್ತು. ಸಾರಿಗೆ ಬಸ್ಗಳ ಸಂಚಾರದಲ್ಲಿ ಯಾವ ವ್ಯತ್ಯಯವೂ ಇಲ್ಲದ್ದರಿಂದ ಜನಜೀವನಕ್ಕೆ ಯಾವ ತೊಂದರೆಯೂ ಇರಲಿಲ್ಲ.
ಬಂದ್ಗೆ ನರೇಗಲ್ಲದಲ್ಲಿನ ಯಾವ ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಿರಲಿಲ್ಲ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ನಾರಾಯಣಗೌಡ ಬಣದ ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ನಮ್ಮ ಬಣದಿಂದ ಮುಖ್ಯವಾಗಿ ಎರಡು ಬೇಡಿಕೆಗಳಿದ್ದವು. ಪುಂಡಾಡಿಕೆ ನಡೆಸಿದ ಪುಂಡರನ್ನು ಬಂಧಿಸಬೇಕು ಮತ್ತು ಮರಾಠಿಗರು ಹಾಕಿದ್ದ ಪೋಕ್ಸೋ ಕೇಸ್ನ್ನು ಹಿಂಪಡೆಯಬೇಕೆಂಬುದಾಗಿತ್ತು. ಬೆಳಗಾವಿಯ ಪೊಲೀಸ್ ಕಮಿಷನರ್ ಈ ಎರಡೂ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಕಾರ್ಯ ನಿರ್ವಹಿಸಿದ್ದರಿಂದ ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರು ಈ ಬಂದ್ಗೆ ಬೆಂಬಲ ನೀಡಿರಲಿಲ್ಲ. ಅದೂ ಅಲ್ಲದೆ ಈಗ ಪರೀಕ್ಷೆಗಳ ಕಾಲವಿದ್ದು, ಬಂದ್ ನಡೆಸಿದರೆ ವಿದ್ಯಾರ್ಥಿಗಳ ಜೀವನಕ್ಕೆ ತೊಂದರೆಯಾಗುತ್ತದೆ ಎಂದು ನಮ್ಮ ಬಣ ಬಂದ್ಗೆ ಕರೆ ನೀಡಿರಲಿಲ್ಲ ಎಂದರು.