ಬೆಂಗಳೂರು: ಶನಿವಾರ ಕನ್ನಡ ಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಶನಿವಾರ ನಡೆಯಲಿರುವ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ ಬಂದ್ ದಿನವೇ ಸರ್ಕಾರಿ, ಖಾಸಗಿ, ಅನುದಾನಿತ ಎಲ್ಲಾ ಶಾಲೆಗಳಲ್ಲೂ ಪರೀಕ್ಷೆ ನಡೆಯಲಿದ್ದು ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಆತಂಕ ಶುರುವಾಗಿದೆ. ಶನಿವಾರ ಬಂದ್ ಇರುವ ಕಾರಣ ನಿಗದಿಯಾಗಿರುವ ಪರೀಕ್ಷೆಗಳು ನಡೆಯುತ್ತವೆಯೋ ಇಲ್ಲವೋ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದ ಕಾರಣ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
1 ರಿಂದ 3ನೇ ತರಗತಿಗೆ ನಲಿ-ಕಲಿ ಮೌಲ್ಯಮಾಪನ, 4-5ನೇ ತರಗತಿಗೆ ಗಣಿತ ವಿಷಯಗಳ ಪರೀಕ್ಷೆ, 6 ರಿಂದ 8ನೇ ತರಗತಿಗೆ ಗಣಿತ ವಿಷಯಗಳ ಪರೀಕ್ಷೆ ನಡೆಯಲಿದೆ. ಖಾಸಗಿ ಶಾಲೆಗಳಲ್ಲಿ ಬೇರೆ ಬೇರೆ ವಿಷಯಗಳ ಪರೀಕ್ಷೆ ನಡೆಯಲಿದೆ. ಆದ್ರೆ ಬಂದ್ ಇರುವ ಕಾರಣದಿಂದ ಪರೀಕ್ಷೆಗಳು ನಡೆಯೋದು ಅನುಮಾನ ಅನ್ನೋ ಹಾಗಾಗಿದೆ.
ಈಗಾಗಲೇ ಶನಿವಾರ ಬಂದ್ ಬೇಡ ಎಂದು ಪೋಷಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ಪರೀಕ್ಷೆ ಸಮಯದಲ್ಲಿ ಬಂದ್ ಬೇಡ ಎಂದಿದ್ದಾರೆ. ಪರೀಕ್ಷಾ ದಿನಾಂಕಗಳು ಈ ಹಿಂದೆಯೇ ನಿರ್ಧಾರ ಆಗಿದೆ. ನಾಡು-ನುಡಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಆದರೆ ಬಂದ್ನಲ್ಲಿ ಭಾಗಿಯಾಗಲು ಆಗುವುದಿಲ್ಲ. ಪರೀಕ್ಷೆ ಮುಂದೂಡಿಕೆ ಸಾಧ್ಯವಿಲ್ಲ ಎಂದಿದ್ದಾರೆ.