ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯ ಸರಕಾರ ಸಂವಿಧಾನದ ಆಶಯ ಬದಿಗೋತ್ತಿ ಎಸ್ಸಿ/ಎಸ್ಟಿ ಪಂಗಡದ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ದಾರೆ. ರಾಜ್ಯ ಸರಕಾರದ ಈ ಧೋರಣೆ ಖಂಡಿಸಿ ಜು.25ರಂದು ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹನುಮಂತಪ್ಪ ದೊಡ್ಡಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಶೋಷಿತ ಸಮುದಾಯಗಳ ಆಶಯಗಳನ್ನು ಈಡೇರಿಸುವ ಜತೆಗೆ, ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡಬೇಕಿತ್ತು. ಶಿಕ್ಷಣದಿಂದ ತಮ್ಮ ಬದುಕನ್ನು ಹಸನು ಮಾಡಿಕೊಳ್ಳುವ ಮೂಲಕ ಮುಖ್ಯವಾಹಿನಿಗೆ ಬರಲು ಇದರಿಂದ ಸಾಧ್ಯವಾಗುತ್ತಿತ್ತು. ಈ ಕಾರಣಕ್ಕಾಗಿಯೇ ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಆದರೆ, ಈಗಿರುವ ರಾಜ್ಯ ಸರಕಾರ ಸಂವಿಧಾನದ ಆಶಯ ಬದಿಗೊತ್ತಿ ಎಸ್ಸಿ/ಎಸ್ಟಿ ಪಂಗಡದ ವಿದ್ಯಾರ್ಥಿಗಳಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಎಸ್ಸಿ/ಎಸ್ಟಿ ಹಣ ದುರುಪಯೋಗಪಡಿಸಿಕೊಂಡ ಸರಕಾರದ ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕೂಡಲೇ ರಾಜೀನಾಮೆ ನೀಡಬೇಕು. ಬಡ ವಿದ್ಯಾರ್ಥಿಗಳ ಪ್ರೋತ್ಸಾಹಧನವನ್ನು ಸರಕಾರ ಕಿತ್ತುಕೊಂಡಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸಾಮಾಜಿಕ ನ್ಯಾಯದ ವಿರುದ್ಧವಾಗಿ ಆಡಳಿತ ಮಾಡುತ್ತಿದೆ. ಪಿಎಚ್ಡಿ ಹಾಗೂ ಉನ್ನತ ವ್ಯಾಸಂಗ ಮಾಡಲು ವಿದೇಶಕ್ಕೆ ಹೋಗುವ ವಿದ್ಯಾರ್ಥಿಗಳ ಸಹಾಯಧನಕ್ಕೂ ಸರಕಾರ ಕತ್ತರಿ ಹಾಕಿದ್ದು, ಈ ಯೋಜನೆ ಕೂಡಲೇ ಮುಂದುವರಿಸಬೇಕು ಎಂದು ಮನವಿ ಮಾಡಿಕೊಂಡರು.
ಎಸ್ಸಿ/ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಸರಕಾರ ಅಲ್ಪಪ್ರಮಾಣದಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧವನವನ್ನು ನೀಡುತ್ತಾ ಬಂದಿದೆ. ಇದನ್ನು ಹೆಚ್ಚು ಮಾಡಬೇಕಿತ್ತು. ಇದನ್ನು ಹೊರತುಪಡಿಸಿ, ಇದಕ್ಕೆ ಯಾವುದೇ ಕಾರಣವನ್ನು ನೀಡದೇ ಪ್ರೋತ್ಸಾಹ ಧನವನ್ನು ನಿಲ್ಲಿಸಿರುವುದು ಖಂಡನೀಯ. ಇದಕ್ಕೆ ಹಾಕಿರುವ ಶೇ.75 ಅಂಕ ಪಡೆದಿರಬೇಕು, ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ಮೀರಬಾರದು ಎಂಬ ಮಾನದಂಡ ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪರಸಪ್ಪ ಮೆಣಸಗಿ, ಈಶ್ವರ ದೊಡ್ಡಮನಿ, ಸೋಮಯ್ಯ ದೊಡ್ಮನಿ, ಶಿವು ಭೂಮದ, ಶರಣು ಹಲಗಿ ಇದ್ದರು.
ಸಿದ್ದರಾಮಯ್ಯ ನಾಯಕತ್ವದ ರಾಜ್ಯ ಸರಕಾರ ಎಸ್ಸಿ/ಎಸ್ಟಿ ಜನಾಂಗದ ವಿರೋಧಿಯಾಗಿದೆ. ನಮ್ಮ ಸಮುದಾಯದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದೆ. ಇವರಿಗೆ ಧೈರ್ಯವಿದ್ದರೆ ಇತರೇ ಸಮುದಾಯದ ಹಣವನ್ನು ಮುಟ್ಟಲಿ ಎಂದು ಹನುಮಂತಪ್ಪ ದೊಡ್ಡಮನಿ ಸವಾಲು ಹಾಕಿದರು.