ವಿಜಯಸಾಕ್ಷಿ ಸುದ್ದಿ, ಗದಗ : ಬಡತನದ ಹಿನ್ನೆಲೆಯಿಂದ ಬಂದು ಇಡೀ ದೇಶವೇ ಮೆಚ್ಚುವಂತೆ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ತಂದ ಸರ್ ಸಿದ್ಧಪ್ಪ ಕಂಬಳಿಯವರು ಶಿಕ್ಷಣ ಕ್ಷೇತ್ರದ ಮೇರುಪರ್ವತ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಉಪನ್ಯಾಸಕರು ಹಾಗೂ ಅಕ್ಷರ ದಾಸೋಹ ಅಧಿಕಾರಿಗಳಾದ ಶಂಕರ ಹಡಗಲಿ ನುಡಿದರು.
ಅವರು ಇತ್ತೀಚೆಗೆ ನಗರದ ತೋಂಟದ ಸಿದ್ಧೇಶ್ವರ ಪ.ಪೂ ಕಾಲೇಜಿನಲ್ಲಿ ಜರುಗಿದ ಕರ್ನಾಟಕ ಏಕೀಕರಣ ಯಶೋಗಾಥೆ ಸರಣಿ ಕಾರ್ಯಕ್ರಮದಲ್ಲಿ ಸರ್ ಸಿದ್ಧಪ್ಪ ಕಂಬಳಿಯವರ ಕುರಿತು ಉಪನ್ಯಾಸ ನೀಡುತ್ತಿದ್ದರು.
ಶಿಕ್ಷಣ ಸಚಿವರಾದ ನಂತರ ಅವರ ಕಾರ್ಯವೈಖರಿ, ಅಧ್ಯಯನಶೀಲತೆ ಮತ್ತು ಸಮರ್ಪಣಾ ಶೈಲಿಯನ್ನು ಕಂಡು ಬ್ರಿಟಿಷರು ವಿಸ್ಮಯಗೊಂಡರು. ಬ್ರಿಟಿಷ್ ಸರ್ಕಾರ ಖರ್ಚು ಉಳಿಸಲು ಧಾರವಾಡದ ಕರ್ನಾಟಕ ಕಾಲೇಜನ್ನು ಮುಚ್ಚಲು ಸರ್ಕಾರ ಮುಂದಾಗಿತ್ತು. ಆದರೆ ಕಾಲೇಜು ಮುಚ್ಚಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಿದ್ಧಪ್ಪನವರು ಕಠಿಣ ನಿಲುವು ತಳೆದರು. ಕರ್ನಾಟಕ ಏಕೀಕರಣದ ಕನಸನ್ನು ಕಂಡಿದ್ದ ಕಂಬಳಿಯವರು ಕರ್ನಾಟಕ ಏಕೀಕರಣದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಮಹಾಸ್ವಾಮಿಗಳು ಹಾಗೂ ಅತಿಥಿಗಳು ಕಾರ್ಯಕ್ರಮದ ಆರಂಭಕ್ಕೂ ಮುನ್ನ ಕರ್ನಾಟಕ ಸುವರ್ಣ ಸಂಭ್ರಮದ ಸವಿನೆನಪಿಗಾಗಿ ನಗರದ ಭೂಮರಡ್ಡಿ ವೃತ್ತದ ಹತ್ತಿರ ಸ್ಥಾಪಿತವಾದ ಶಿಲಾಸ್ತಂಭಕ್ಕೆ ಮಾಲಾರ್ಪಣೆ ಮಾಡಿದರು. ಡಾ. ಜಿ.ಬಿ ಪಾಟೀಲ ಅವರು ಕನ್ನಡ ಭಾಷೆಯ ಮಹತ್ವದ ಕುರಿತು ಮಾತನಾಡಿದರು. ನಯನಾ ಅಳವಂಡಿ ಭಾವಗೀತೆ ಹಾಡಿದಳು.
ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ ಸ್ವಾಗತಿಸಿದರು. ವೇದಿಕೆ ಮೇಲೆ ಸದಸ್ಯರಾದ ಅಮರೇಶ ಅಂಗಡಿ, ಕನ್ನಡ ಮತ್ತು ಸಂಸ್ಕೃತಿ ವೇದಿಕೆ ಭೈರನಹಟ್ಟಿಯ ಕಾರ್ಯದರ್ಶಿ ರಮೇಶ ರಾಮೇನಹಳ್ಳಿ ಉಪಸ್ಥಿತರಿದ್ದರು. ತೋಂಟದ ಸಿದ್ಧೇಶ್ವರ ಕಾಲೇಜಿನ ಪ್ರಾಚಾರ್ಯರಾದ ವೈ.ಎಸ್. ಮತ್ತೂರ ನಿರೂಪಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಗದುಗಿನಲ್ಲಿ ತೋಂಟದಾರ್ಯ ವಿದ್ಯಾಪೀಠದಿಂದ ನಡೆಯುತ್ತಿರುವ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ಸರ್ ಸಿದ್ಧಪ್ಪ ಕಂಬಳಿಯವರ ಹೆಸರು ನಾಮಕರಣ ಮಾಡಿದ್ದ ಪೂಜ್ಯರು ಹುಬ್ಬಳ್ಳಿಯಲ್ಲಿ ಸರ್ ಸಿದ್ಧಪ್ಪ ಕಂಬಳಿಯವರ ಮೂರ್ತಿ ಪ್ರತಿಷ್ಠಾಪನೆಗೂ ಪ್ರೇರಣೆ ನೀಡಿದ್ದನ್ನು ಸ್ಮರಿಸಿದರು.