ತುಮಕೂರು:- ಕರ್ನಾಟಕಕ್ಕೆ SM ಕೃಷ್ಣರಂತಹ ಸೌಮ್ಯ ರಾಜಕಾರಣಿ ಬೇಕು ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ.
ಎಸ್ಎಂ ಕೃಷ್ಣ ನಿಧನ ಹಿನ್ನೆಲೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಅವರು, ಸಂಸ್ಕಾರವಂತ ಮನುಷ್ಯ ಹೇಗಿರಬೇಕು ಎಂಬುದಕ್ಕೆ ಎಸ್ಎಂ ಕೃಷ್ಣ ಮಾದರಿಯಾಗಿದ್ದರು. ಅವರ ರಾಜಕೀಯ ಹಾಗೂ ಖಾಸಗಿ ಜೀವನದಲ್ಲಿ ಒರಟಾಗಿ, ಏಕವಚನದಲ್ಲಿ ಮಾತನಾಡಿದ್ದು ನಾವು ನೋಡಿಲ್ಲ ಎಂದರು.
ಎಸ್ಎಂ ಕೃಷ್ಣ ಅವರು ಕರ್ನಾಟಕ ರಾಜ್ಯದಲ್ಲಿ ಯಾವುದೇ ರಾಜಕಾರಣಿ ಪಡೆಯದಂತಹ ಸ್ಥಾನ, ಗೌರವ ಪಡೆದಿದ್ದಾರೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಎಲ್ಲಾ ಆಯಾಮಗಳಲ್ಲೂ ಕೆಲಸ ಮಾಡಿದ್ದಾರೆ. ಎಲ್ಲಾ ಸೇವೆಗೂ ಗೌರವ ತಂದುಕೊಡುವ ವ್ಯಕ್ತಿತ್ವ ಅವರದ್ದು ಎಂದರು.
SM ಕೃಷ್ಣ ಅವರು ತೋರಿಸುತ್ತಿದ್ದ ಸೌಜನ್ಯ, ಹಾಗೂ ರಾಜಕೀಯ ಶಕ್ತಿಯನ್ನು ಎಂದಿಗೂ ಮರೆಯೋದಿಲ್ಲ. ವಿಧಾನಸಭೆಯಲ್ಲಿ ನಮ್ಮನ್ನು ಮೊದಲು ಗುರುತಿಸಿದ್ದು ಕೃಷ್ಣರವರು. ಆರಂಭದ ದಿನಗಳಲ್ಲಿ ಇಂತಹ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡುತ್ತಿದ್ದರು. ವಿಧಾನಸಭೆಯಲ್ಲಿ ಯಾರಿಗೂ ತಾರತಮ್ಯ ಮಾಡದೇ ಎಲ್ಲರನ್ನು ಸಮಾನವಾಗಿ ಕಾಣುತ್ತಿದ್ದರು.
ಮಂತ್ರಿಯಾದಮೇಲೆ ನಮಗೆ ಹೆಚ್ಚಿನ ಅನುದಾನ ನೀಡಿ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಿದ್ದರು. ಅವರು ಮುಖ್ಯಮಂತ್ರಿಯಾದಮೇಲೆ ನಾನು ಸೋತಿದ್ದೆ. ಆಗ ವಿಧಾನಸಭೆಯಲ್ಲಿ ಮಾಧುಸ್ವಾಮಿಯಂತವರು ಇರಬೇಕಿತ್ತು ಎಂದು ನೆನೆದಿದ್ದರು. ಅದನ್ನು ಎಂದಿಗೂ ಮರೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.