ಹುಬ್ಬಳ್ಳಿ: ಕೇಂದ್ರ ಸರ್ಕಾರವು ಕರ್ನಾಟಕದ ತೆರಿಗೆ ಪಾಲನ್ನು ಶೇ.3.647ರಿಂದ ಶೇ.4.131ಕ್ಕೆ ಹೆಚ್ಚಿಸಿರುವುದರಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ಹಂಚಿಕೆ ದೊರೆಯಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯವಾಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಗಳು ಸಂಪೂರ್ಣವಾಗಿ ಅಸಂಬದ್ಧವಾಗಿದ್ದು, ಯಾವುದೇ ವಾಸ್ತವಾಂಶಾಧಾರವಿಲ್ಲ ಎಂದು ತಳ್ಳಿಹಾಕಿದರು. 2026–27ರ ಕೇಂದ್ರ ಬಜೆಟ್ ಪ್ರಕಾರ, ಕರ್ನಾಟಕಕ್ಕೆ ಒಟ್ಟು ₹63,049 ಕೋಟಿ ರೂ. ತೆರಿಗೆ ಹಂಚಿಕೆ ಮಾಡಲಾಗಿದ್ದು, ಇದು ಕಳೆದ ವರ್ಷದ ಹಂಚಿಕೆಗಿಂತ ಹೆಚ್ಚಾಗಿದೆ. 16ನೇ ಹಣಕಾಸು ಆಯೋಗದ ವರದಿ ಪ್ರಕಾರ, ರಾಜ್ಯಗಳಿಗೆ ನೀಡಲಾಗುವ ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇ.41ರಲ್ಲಿಯೇ ಮುಂದುವರಿಸಲಾಗಿದೆ.
ಆದರೆ ತೆರಿಗೆ ಹಂಚಿಕೆಯ ಸೂತ್ರದಲ್ಲಿ ಕೆಲವು ಬದಲಾವಣೆಗಳು ಆಗಿರುವುದರಿಂದ ವಿವಿಧ ರಾಜ್ಯಗಳ ಪಾಲಿನಲ್ಲಿ ವ್ಯತ್ಯಾಸ ಉಂಟಾಗಿದೆ. ಈ ಹೊಸ ಸೂತ್ರದ ಅನುಸಾರ ಕರ್ನಾಟಕಕ್ಕೂ ಹೆಚ್ಚುವರಿ ತೆರಿಗೆ ಪಾಲು ದೊರೆತಿದ್ದು, ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ನೆರವಾಗಲಿದೆ ಎಂದು ಜೋಶಿ ಹೇಳಿದರು. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ನ್ಯಾಯಯುತವಾಗಿ ತೆರಿಗೆ ಹಂಚಿಕೆ ಮಾಡುತ್ತಿದ್ದು, ಕರ್ನಾಟಕದ ಹಿತಾಸಕ್ತಿಯನ್ನು ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.



