ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಆರಾಧ್ಯವೈವ, ಇತಿಹಾಸ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಭಕ್ತರ ಸೇವಾ ಸಮಿತಿ ಮತ್ತು ಅರ್ಚಕರ ವತಿಯಿಂದ ಸಂಭ್ರಮ, ಶೃದ್ಧಾ ಭಕ್ತಿಯಿಂದ ಕಾರ್ತಿಕ ದೀಪೋತ್ಸವ ನೆರವೇರಿಸಲಾಯಿತು.
ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಸೋಮೇಶ್ವರ ಭಕ್ತರ ಸೇವಾ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ಮನುಷ್ಯನ ಜೀವನದಲ್ಲಿನ ಅಜ್ಞಾನವೆಂಬ ಕತ್ತಲೆಯನ್ನು ಹೊಡೆದೋಡಿಸಿ ಆಂತರಿಕ ಚೇತನಕ್ಕೆ ಶಕ್ತಿ ತುಂಬಲು ಹಾಗೂ ನಾಡಿನ ಜನರ ಶಾಂತಿ, ನೆಮ್ಮದಿ, ಸೌಹಾರ್ದತೆಯ ಪ್ರತೀಕವಾಗಿ ಜರುಗುವ ಈ ಕಾರ್ತಿಕಮಾಸ ಅತ್ಯಂತ ಶ್ರೇಷ್ಠವಾದುದಾಗಿದೆ. ಸಂಪ್ರದಾಯಬದ್ಧ, ಅರ್ಥಪೂರ್ಣವಾದ ಇಂತಹ ಪವಿತ್ರ ಆಚರಣೆಗಳಿಗೆ ಮಹತ್ವದ ಸ್ಥಾನವಿದೆ. ಇವುಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ನಮ್ಮ ಸಂಸ್ಕೃತಿ, ಧರ್ಮ ಉಳಿಸಲು ಬದ್ಧರಾಗಬೇಕು ಎಂದು ಹೇಳಿದರು.
ಶಿವಪಾರ್ವತಿಯರು ನಂದಿ ಮೇಲೆ ಕುಳಿತ ಸೊಮೇಶ್ವರ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸೋಮೇಶ್ವರನ ಮೂರ್ತಿಯಪಲ್ಲಕ್ಕಿ ಉತ್ಸವ ಸೇವೆ ಮಂಗಲ ವಾದ್ಯಗಳೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಅರ್ಚಕರಾದ ಸೋಮನಾಥ ಪೂಜಾರ, ರಾಘವೇಂದ್ರ ಪೂಜಾರ, ಸಮೀರ ಪೂಜಾರ, ಚಂದ್ರಶೇಖರಯ್ಯ ಪುರಾಣಿಕಮಠ, ದೇವಸ್ಥಾನ ಕಮಿಟಿಯವರು, ಭಕ್ತರು ಪಾಲ್ಗೊಂಡಿದ್ದರು.