ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಪಟ್ಟಣದ ಶ್ರೀ ಗುರು ಗಡ್ಡದೇವರಮಠದಲ್ಲಿ ಪರಂಪರಾಗತವಾಗಿ ನಡೆದು ಬಂದಿರುವ ಕಾರ್ತಿಕೋತ್ಸವ ಕಾರ್ಯಕ್ರಮ ಡಿ.1ರಂದು ಸಂಜೆ6.30ಕ್ಕೆ ಮಠದ ಆವರಣದಲ್ಲಿ ನೆರವೇರಲಿದೆ ಎಂದು ಶ್ರೀಮಠದ ವಂಶಸ್ಥರು ಹಾಗೂ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ತಿಳಿಸಿದರು.
ಅವರು ಈ ಕುರಿತು ಬುಧವಾರ ಗುರುಗಡ್ಡದೇವರ ಮಠದ ಆವರಣದಲ್ಲಿ ಮಾಹಿತಿ ನೀಡಿ, ಶ್ರೀಮಠವು ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹೊಂದಿದ್ದು, ಈ ಭಾಗದ ಜನರ ಶೃದ್ಧಾ-ಭಕ್ತಿ ಕೇಂದ್ರವಾಗಿದೆ. ಇದು ಜಾಗೃತ ಮಠವಾಗಿದ್ದು, ಶ್ರೀಮಠದ ಭಕ್ತರು ತಾಲೂಕಿನ ಗೋವನಾಳ, ಗುಲಗಂಜಿಕೊಪ್ಪ, ಹರ್ಲಾಪೂರ ಮುಂತಾದ ಕಡೆ ಇದ್ದಾರೆ. ಗುರುಗಡ್ಡದ್ದೇವರಮಠ ಶ್ರೀಗಳು ಇಲ್ಲಿಯೇ ನೆಲೆನಿಂತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಸಂಪ್ರದಾಯದಂತೆ ಡಿ.1ರಂದು ಶ್ರೀಮಠದಲ್ಲಿ ಸಹಸ್ರ ದೀಪಗಳೊಂದಿಗೆ ಕಾರ್ತಿಕೋತ್ಸವವನ್ನು ವೈಭವದಿಂದ ಆಚರಿಸುವುದಾಗಿ ಹೇಳಿದರು.
ಕಾರ್ತಿಕ ದೀಪೋತ್ಸವದ ನಂತರ ಚನ್ನಮ್ಮನವನ ಕಲ್ಯಾಣ ಮಂಠಪದಲ್ಲಿ ಜರುಗುವ ಧಾರ್ಮಿಕ ಸಭೆಯ ಸಾನ್ನಿಧ್ಯವನ್ನು ಬನ್ನಿಕೊಪ್ಪ/ಮೈಸೂರಿನ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯರು ವಹಿಸಲಿದ್ದಾರೆ. ಲಕ್ಮೇಶ್ವರದ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು ನೇತೃತ್ವ ವಹಿಸುವರು. ಅನೇಕ ಗಣ್ಯರು, ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಬಳಿಕ ಕೊತಬಾಳದ ರಾಚಯ್ಯ ಅವರ ತಂಡ ಹಾಗೂ ಹರ್ಲಾಪುರ ಸಾಂಬಯ್ಯ ಹಿರೇಮಠ ಅವರ ತಂಡದಿಂದ ನಾಡಿನ ಸಂಸ್ಕೃತಿ ಬಿಂಬಿಸುವ ಜಾನಪದ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಗಡ್ಡಯ್ಯಸ್ವಾಮಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಬೆಂಡಿಗೇರಿ, ರಾಜೀವ ಕುಂಬಿ, ಪದ್ಮರಾಜ ಪಾಟೀಲ, ಜಯಕ್ಕ ಕಳ್ಳಿ, ಈರಣ್ಣ ಅಂಕಲಕೋಟಿ, ಬಾಬಣ್ಣ ಅಳವಂಡಿ, ವಿರೂಪಾಕ್ಷಪ್ಪ ಪಡಗೇರಿ, ರಮೇಶ ಗಡದವರ, ಕಿರಣ ನವಲೆ, ಶಿವಜೋಗೆಪ್ಪ ಚಂದರಗಿ, ಮಹೇಶ ಲಿಂಬಯ್ಯ ಸ್ವಾಮಿಮಠ, ರಾಮಣ್ಣ ರಿತ್ತಿ, ಛಾಯಪ್ಪ ಬಸಾಪುರ, ಸಾಹೇಬಜಾನ ಹವಾಲ್ದಾರ, ವಿರೂಪಾಕ್ಷಪ್ಪ ಆದಿ, ಶಿವಯೋಗಿ ಗಡ್ಡದೇವರಮಠ, ಶೇಖಪ್ಪ ಹುರಕಡ್ಲಿ, ಮಲ್ಲಯ್ಯ ಭಕ್ತಿಮಠ, ಫಕ್ಕೀರೇಶ ನಂದೆಣ್ಣವರ, ವೆಂಕಟೇಶ ಮಾತಾಡೆ, ಪ್ರಕಾಶ ಕೊಂಚಿಗೇರಿಮಠ, ಮಲ್ಲನಗೌಡ ಪಾಟೀಲ, ಸಿದ್ದು ದುರಗಣ್ನವರ ಸೇರಿದಂತೆ ಮಠದ ಭಕ್ತರು ಇದ್ದರು.