ವಿಜಯಸಾಕ್ಷಿ ಸುದ್ದಿ, ಧಾರವಾಡ : ಸಾಹಿತ್ಯದ ಬೆಳಕು ನೂರಾರು ಕಾಲ ಬೆಳಗುತ್ತಲೇ ಇರಬೇಕು. ದ.ರಾ. ಬೇಂದ್ರೆಯವರ ಈ ನಾಡಲ್ಲಿ ಅವರ ನಡೆ-ನುಡಿ, ಸಾಹಿತ್ಯದ ಪ್ರಭೆ ಇರುವುದರಿಂದ, ಇಂತಹ ಯುವ ಸಮೂಹ ಸಾಹಿತ್ಯದ ಮುಂಚೂಣಿಯಲ್ಲಿರುವುದು ಮುಂದಿನ ಸಮಾಜಕ್ಕೆ ಆಶಾದಾಯಕ ಬೆಳವಣಿಗೆ ಎಂದು ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ, ಚಲನಚಿತ್ರ ನಿರ್ಮಾಪಕರೂ ಆದ ರವೀಂದ್ರನಾಥ ಬಿ.ದಂಡಿನ ಅಭಿಪ್ರಾಯಪಟ್ಟರು.
ಇಲ್ಲಿನ ಅಕ್ಷರ ದೀಪ ಸಾಹಿತ್ಯ ಫೌಂಡೇಶನ್ ವತಿಯಿಂದ ಶ್ರೀ ಪ್ರವೀಣಕುಮಾರ ಕನ್ಯಾಳ ಅವರ ಚೊಚ್ಚಲ ಸಂಪಾದಕೀಯ ಕವನ ಸಂಕಲನ `ಅಕ್ಷರ ದೀಪ’ದ ಲೋಕಾರ್ಪಣೆ ಹಾಗೂ ಸಾಧನಕೇರಿಯ ಸಾಧಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಸ್.ಐ. ಕುಲಕರ್ಣಿ ಮಾತನಾಡಿ, ಸಾಹಿತ್ಯ ಹಾಗೂ ಬದುಕು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಕನ್ನಡಿಗರಾದ ನಮಗೆ ಕನ್ನಡ ಭಾಷೆ, ನೆಲದ ಅಭಿಮಾನ ಇರಬೇಕು.
ಪ್ರತಿಯೊಬ್ಬರಲ್ಲಿಯೂ ಕನ್ನಡ ಬೇರೂರಬೇಕಿದೆ. ಮೊದಲು ಮಕ್ಕಳಿಗೆ ಕನ್ನಡ ಭಾಷೆ ಬರೆಯಲು, ಮಾತನಾಡಲು ಕಲಿಸಬೇಕು. ಆಗ ಮುಂದಿನ ಪೀಳಿಗೆ ಕನ್ನಡದ ಏಳ್ಗೆಯನ್ನು ಸಾಧಿಸಲು ಸಾಧ್ಯ ಎಂದರು.
ಕೃತಿಯ ಕುರಿತು ಗಣಪತಿ ಹೆಗಡೆ ದಾಂಡೇಲಿ ಮಾತನಾಡಿದರು. ರೋಹಿಣಿ ಮಿರ್ಜಿ, ನಿಶಾ ಮುಳಗುಂದ, ಕವಯತ್ರಿ ಚಂದ್ರಕಲಾ ಇಟಗಿಮಠ, ಪತ್ರಕರ್ತ ಮಂಜುನಾಥ ರಾಠೋಡ ಗಜೆಂದ್ರಗಡ, ಸಾಹಿತಿ ಪ್ರವೀಣಕುಮಾರ ಕನ್ಯಾಳ, ವಿಶೇಷ ಆಹ್ವಾನಿತರಾದ ರಾಘವೇಂದ್ರ ಕೋಲಕಾರ ಹುಬ್ಬಳ್ಳಿ, ಸಚಿನ್ ಒಡೆಯರ್ ಮುಂಡರಗಿ, ಡಾ. ವಸಂತ ಅಗಸಿಮನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಅರ್ಚನಾ ಪಾಟೀಲ್ ಗದಗ ಸ್ವಾಗತಿಸಿದರು. ಜಯಶ್ರೀ ತೆಗ್ಗಿನಮನಿ ನಿರೂಪಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಪ್ಪತ್ತಗಿರಿ ವೇದಕೇಯ ರಾಜ್ಯಾಧ್ಯಕ್ಷರಾದ ಚಂದ್ರಕಲಾ ಇಟಗಿಮಠ ಮಾತನಾಡಿ, ನಮ್ಮ ಕನ್ನಡವನ್ನು ಉಳಿಸಬೇಕೆಂಬ ಆಶಯ ವ್ಯಕ್ತಪಡಿಸಿ, ಕನ್ನಡ ಕಿಚ್ಚನ್ನು ಎಲ್ಲೆಡೆ ಮೊಳಗಿಸುವುದರ ಮೂಲಕ ಅಕ್ಷರ ದೀಪ ಫೌಂಡೇಶನ್ ಹೆಮ್ಮೆ ಮೂಡಿಸುತ್ತಿದೆ ಎಂದರು.