ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಟ್ರೆಕ್ಕಿಂಗ್ಗೆ ತೆರಳಿದ ಕೇರಳದ ಮಹಿಳೆ ಶರಣ್ಯ (36) ಇನ್ನೂ ಪತ್ತೆಯಾಗಿಲ್ಲ. ಈ ಪ್ರಕರಣದ ಶೋಧ ಕಾರ್ಯವು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಅರಣ್ಯ ಇಲಾಖೆ, ಪೊಲೀಸ್ ಮತ್ತು ಸ್ಥಳೀಯರು ರಾತ್ರಿಯಿಂದಲೇ ಹುಡುಕಾಟ ನಡೆಸುತ್ತಿದ್ದಾರೆ.
ಮಡಿಕೇರಿ ತಾಲ್ಲೂಕಿನ ಯವಕಪಾಡಿ ಗ್ರಾಮದ ಹೋಂಸ್ಟೇಯಲ್ಲಿ ತಂಗಿದ್ದ ಶರಣ್ಯ ಒಬ್ಬರೇ ಟ್ರೆಕ್ಕಿಂಗ್ಗೆ ಹೋಗಿದ್ದರು. ಇತರ ಪ್ರವಾಸಿಗರು ಹಿಂತಿರುಗಿ ಬಂದರೂ ಶರಣ್ಯ ವಾಪಸ್ ಆಗದ ಕಾರಣ ಸ್ಥಳೀಯರು ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಶೋಧ ಕಾರ್ಯವನ್ನು ನಾಪೋಕ್ಲು ಎಸ್ಐ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ, 2 ಪೊಲೀಸ್ ತಂಡಗಳು ಮತ್ತು 3 ಅರಣ್ಯ ಸಿಬ್ಬಂದಿ ತಂಡಗಳೊಂದಿಗೆ ಗ್ರಾಮಸ್ಥರು ಶೋಧ ನಡೆಸುತ್ತಿದ್ದಾರೆ. ಡ್ರೋನ್ ಹಾಗೂ ಶ್ವಾನದಳ ಸಹ ಕಾರ್ಯಾಚರಣೆಗೆ ಬಳಸಲಾಗುತ್ತಿದೆ.
ಕೇರಳದಲ್ಲಿಯೇ ಉದ್ಯೋಗ ಮಾಡುತ್ತಿದ್ದ ಶರಣ್ಯರ ಕುಟುಂಬಕ್ಕೆ ಈ ಘಟನೆ ಕುರಿತ ಮಾಹಿತಿ ನೀಡಲಾಗಿದೆ. ಶೋಧ ಕಾರ್ಯ ಮುಂದುವರಿದರೂ ಈವರೆಗೆ ಶರಣ್ಯರ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ಕೊಡಗು ಎಸ್ಪಿ ಬಿಂದುಮಣಿ ತಿಳಿಸಿದ್ದಾರೆ.



