ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನು ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ನೆಲಸಮ ಮಾಡಲಾಗಿತ್ತು. ಈ ಬಗ್ಗೆ ವಿಷ್ಣು ಅಭಿಮಾನಿಗಳು ಸಾಕಷ್ಟು ಬೇಸರ ವ್ಯಕ್ತಪಡಿಸಿದ್ದರು. ವಿಷ್ಣು ಸ್ವಾರಕ ಕೆಡವಿದ್ದು ನಟ ಸುದೀಪ್ ಅವರಿಗೆ ಸಾಕಷ್ಟು ಬೇಸರ ತರಿಸಿತ್ತು. ಇದೀಗ ಕಿಚ್ಚ ಸುದೀಪ್ ಅವರು ವಿಷ್ಣು ಸ್ಮಾರಕ ನಿರ್ಮಾಣಕ್ಕಾಗಿ ಕೆಂಗೇರಿ ಬಳಿ ಅರ್ಧ ಎಕರೆ ಜಾಗವನ್ನು ಖರೀದಿ ಮಾಡಿದ್ದಾರೆ. ಆ ಬಗ್ಗೆ ವೀರಕಪುತ್ರ ಶ್ರೀನಿವಾಸ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ್, ‘ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ಪುಣ್ಯಭೂಮಿಯಲ್ಲಿ ನಮಗೆ ದರ್ಶನಕ್ಕೆ ಜಾಗ, ಅವಕಾಶ ಇಲ್ಲ. ಸೆಪ್ಟೆಂಬರ್ 18ರಂದು ನಾವೆಲ್ಲರೂ ಯಜಮಾನರನ್ನು ಬೆಂಗಳೂರಿನಲ್ಲಿ ಎಲ್ಲಿ ಹೋಗಿ ನೋಡಬೇಕು ಎಂದರೆ ಉತ್ತರ ಇಲ್ಲ. ಹಾಗಾಗಿ ಈ ವಿಷಯಕ್ಕೆ ನಾವು ಆದಷ್ಟು ಬೇಗ ತಾರ್ಕಿಕ ಅಂತ್ಯ ಕಾಣಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಆ ನಿಟ್ಟಿನಲ್ಲಿ ನಾವು ಕೆಲಸ ಕೂಡ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
‘ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಡೀ ಅಭಿಮಾನ್ ಸ್ಟುಡಿಯೋದ ಜಾಗವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಆ ಜಾಗವನ್ನು ಮುಟ್ಟುಗೋಲು ಹಾಕಿಕೊಂಡು ಅದರ ಮೂಲ ಉದ್ದೇಶವಾದ ಸ್ಟುಡಿಯೋ ಉಳಿಸಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿ ನಾವು ಹೋರಾಟ ಮಾಡುತ್ತೇವೆ’ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.
‘ಕಿಚ್ಚ ಸುದೀಪ್ ಅವರು ಬಹಳ ದೊಡ್ಡ ನಡೆಯನ್ನು ಘೋಷಣೆ ಮಾಡಿದ್ದಾರೆ. ಕೆಂಗೇರಿಯ ಹತ್ತಿರ ಅರ್ಧ ಎಕರೆ ಜಾಗವನ್ನು ಸುದೀಪ್ ಅವರು ಖರೀದಿ ಮಾಡಿದ್ದಾರೆ. ಅಲ್ಲಿಯೇ ಡಾ. ವಿಷ್ಣುವರ್ಧನ್ ಅವರ ಸ್ಮಾರಕ, ದರ್ಶನ ಕೇಂದ್ರ ಆಗಲಿದೆ. ಶೀಘ್ರದಲ್ಲೇ ಅದರ ನಿರ್ಮಾಣ ಕಾರ್ಯವನ್ನು ಆರಂಭಿಸುತ್ತೇವೆ. ಸೆಪ್ಟೆಂಬರ್ 18ಕ್ಕೆ ನಾವು ಅಡಿಗಲ್ಲು ಹಾಕುತ್ತೇವೆ. ಸೆಪ್ಟೆಂಬರ್ 2ರಂದು ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನ ಸ್ಮಾರಕದ ಮಾಡೆಲ್ ಬಿಡುಗಡೆ ಮಾಡುತ್ತೇವೆ’ ಎಂದರು.
‘ಹಾಗಂತ ಇದನ್ನು ಪುಣ್ಯಭೂಮಿಗೆ ಸಮಾನ ಅಂತ ನಾನು ವಾದ ಮಾಡಲ್ಲ. ಮೈಸೂರಿನಲ್ಲಿ ಇರುವ ಸ್ಮಾರಕಕ್ಕೆ ಸಮ ಎಂದು ಕೂಡ ಹೇಳುವುದಿಲ್ಲ. ಅದಕ್ಕೆ ಅದರದ್ದೇ ಆದ ಘನತೆ ಇದೆ. ಅದು ಸರ್ಕಾರದಿಂದ ನಿರ್ಮಾಣ ಆಗಿದ್ದು. ಇದು ಅಸಂಖ್ಯಾತ ಅಭಿಮಾನಿಗಳ ಭಾವನೆ ಬೆಸೆದಿರುವ ಜಾಗ. ಈ ದರ್ಶನ ಕೇಂದ್ರದಲ್ಲಿ ಏನೆಲ್ಲ ಇರಲಿದೆ ಎಂಬುದನ್ನು ಸೆ.2ಕ್ಕೆ ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ’ ಎಂದು ವೀರಕಪುತ್ರ ಶ್ರೀನಿವಾಸ್ ಹೇಳಿದ್ದಾರೆ.