ಬೆಂಗಳೂರು:- ಮದುವೆಗೆ ನಿರಾಕರಿಸಿದ ಯುವತಿಯೊಬ್ಬಳನ್ನು ಮಾರಕಾಸ್ತ್ರದೊಂದಿಗೆ ಮನೆ ಬಳಿ ಬಂದು ಅಪಹರಿಸಿದ್ದ ಪ್ರಕರಣವೊಂದು ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಇಡೀ ಪ್ರಕರಣವನ್ನು ಕೇವಲ 12 ಗಂಟೆಗಳಲ್ಲಿ ಭೇದಿಸಿ, ಯುವತಿಯನ್ನು ರಕ್ಷಿಸಿರುವ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಚಿಕ್ಕಲ್ಲಸಂದ್ರದಲ್ಲಿ ವಾಸವಿದ್ದ ಪ್ರಥಮ ವರ್ಷದ ಸಿಎ ವಿದ್ಯಾರ್ಥಿನಿಯೊಬ್ಬಳನ್ನು ಬುಧವಾರ ಕಿಡ್ನಾಪ್ ಮಾಡಲಾಗಿದೆ. ಮನೆಯಲ್ಲಿ ನಿಂತಿದ್ದಾಗ ಬೈಕ್ ಮತ್ತು ಆಟೋದಲ್ಲಿ ಬಂದ ಆರೋಪಿಗಳು, ಯುವತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ.
ಈ ಕೃತ್ಯಕ್ಕೆ ಮುಂದಾದವರಲ್ಲಿ ಪ್ರಮುಖ ಆರೋಪಿಯಾಗಿ ರಂಗನಾಥ್ ಎಂಬಾತ ಗುರುತಿಸಲಾಗಿದ್ದು, ಈತ ಹಿಂದೆಯೇ ಯುವತಿಗೆ ಪರಿಚಿತ. ಬೈಕ್ ಮೆಕಾನಿಕ್ ಆಗಿ ಕೆಲಸಮಾಡುತ್ತಿದ್ದ ಈತ, ಕೊಲೆ ಕೇಸೊಂದರಲ್ಲಿ ಹಿಂದೆಯೇ ಜೈಲುಪಾಲನಾಗಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕ, ಯುವತಿಯೊಂದಿಗೆ ಮದುವೆಯಾಗಲು ಪ್ರಯತ್ನಿಸಿದ ರಂಗ, ಯುವತಿ ಹಾಗೂ ಆಕೆಯ ಕುಟುಂಬದಿಂದ ನಿರಾಕರಣೆಯಾದ ಬಳಿಕ ಆಕ್ರೋಶಗೊಂಡಿದ್ದ.
ನಿರಾಕರಣೆ ಹಿನ್ನೆಲೆಯಲ್ಲಿ, ತನ್ನ ಸಹಚರರಾದ ರಾಜೇಶ್, ಚಂದನ್, ಶ್ರೇಯಶ್, ಮಂಜುನಾಥ್ರೊಂದಿಗೆ ಸೇರಿ ಯುವತಿಯನ್ನು ಕಿಡ್ನಾಪ್ ಮಾಡಿದ್ದಾನೆ. ಅಪಹರಣ ಪ್ರಕರಣ ದಾಖಲಾಗುತ್ತಿದ್ದಂತೆಯೇ ಸುಬ್ರಮಣ್ಯಪುರ ಠಾಣೆಯ ಇನ್ಸ್ಪೆಕ್ಟರ್ ರಾಜು ಎಂ.ಎಸ್ ನೇತೃತ್ವದಲ್ಲಿ ತೀವ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು, ಕೇವಲ 12 ಗಂಟೆಗಳಲ್ಲಿ ಯುವತಿಯನ್ನು ಇರಿಸಿಕೊಂಡಿದ್ದ ಸ್ಥಳವನ್ನು ಪತ್ತೆಹಚ್ಚಿ, ಆಕೆಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಇದರೊಂದಿಗೆ, ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ 363, 366 ಮತ್ತು ಇನ್ನಿತರೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.